Dec 1, 2009

ಪ್ರಶ್ನೆಯಿಲ್ಲದ ಉತ್ತರ ಅವಳು...

ನಸು ಬೆಳಕಿನ, ಸವಿ ಸಂಜೆಯ ಮೌನವನ್ನು ಮುನಿಸುವಂತೆ ಮಾಡಿತ್ತು ಆ ಕರೆ. ಏಕಾಂತದ ಏಕತಾನತೆಯನ್ನು ದೂರವಾಗಿಸಿತ್ತು ಫೋನಿನ ಮೆಲುದನಿ. ಅದೆಷ್ಟೋ ದಿನಗಳ ನಂತರ ಅದರಲ್ಲಿ ಮೂಡಿಬಂದಿತ್ತು ಅವಳ ನಗುಮೊಗ. ಒಂದು ಕ್ಷಣ, ಹಾಗೇ ಮನಸು ಜಾರಿತ್ತು ನೆನೆಪಿಗೆ. ಮಾತು ನೆಪಕ್ಕಷ್ಟು ಮಾತ್ರ, ಮನಸಿತ್ತು ನೆನಪಿನಾಚಿನ ಕನಸ ಹತ್ತಿರ.

ಹತ್ತಿರ ಹೆಚ್ಚಾದಷ್ಟೂ `ದೂರ’ ಹತ್ತಿರವಾಗುವುದಂತೆ. ಕೆಲವೊಮ್ಮೆ ದೂರವಿದ್ದರೂ, ಸಿಹಿನೆನಪುಗಳು ಹತ್ತಿರಮಾಡಿಸಿಬಿಡುತ್ತವೆ, ಮನ-ಮನವನ್ನು ಬೆಸೆದು ಬಿಡುತ್ತದೆ. ಆ ನಂಬಿಕೆ ಅವನಲ್ಲೂ ಇತ್ತು. ಅವಳನ್ನು, ಆ ನಂಬಿಕೆಯನ್ನು ನಂಬಿ ಅವನ ಬದುಕೂ ಬದುಕಿತ್ತು, ಉಸಿರ ಹಸಿರೂ ಚಿಗುರಿತ್ತು.

ಚಿಗುರಿತ್ತು ಮೊದಲ ಋತುಮಾನದ ಬರಕೆ ಗಿಡ-ಮರ, ತರುಲತೆ ಸಂಕುಲ. ಚೈತ್ರದನುರಣನೆ ತುಂಬು ಜಗದಗಲ. ತಳಿರು ತುಂಬಿ ನಳನಳಿಸುವ ಹಸಿ ಹಸಿರು ಎಲೆ. ಜೊತೆಗೆ, ಸಾಕುತಾಯಿಯೂ ದೂರಮಾಡಿದ ಒಬ್ಬಂಟಿ ಕೋಗಿಲೆ. ಜೊತೆಗಿರುವ ಮುಗಿಯದ ಅಶ್ರುಮಾಲೆ. ಅಲ್ಲಿ ಅವನು ಮತ್ತು ಸುತ್ತ ಹರಡಿರುವ ಮಬ್ಬುಗತ್ತಲೆ. ದೂರವಾಗುತ್ತಿತ್ತು ಅಲ್ಲಿ, ಅವನ ಬಾಳಲ್ಲಿ ಆ ಹಗಲು, ಮೆಲ್ಲಗೆ ಬಣ್ಣ ಬದಲಾಯಿಸುತ್ತಿತ್ತು ಅಲ್ಲಿ ಕತ್ತಲು.

ಕತ್ತಲು. ಮತ್ತೊಮ್ಮೆ ಹಗಲು ಹಾಸಿಗೆ ಸೇರಿತ್ತು. ಕತ್ತಲ ಹೊದಿಕೆ ಜಗಕೆಲ್ಲ ಹೊದೆಸಿ, ರಾತ್ರಿ ಆಗಲೇ ತಯಾರಾಗಿತ್ತು. ನಿದ್ದೆ ಮಾಡುತ್ತಾ ನಿಂತಿದ್ದ ಸ್ಟ್ರೀಟ್‌ಲೈಟ್‌ಗಳನ್ನೆಲ್ಲ ಒದ್ದು ನಿದ್ದೆಯಿಂದ ಎಬ್ಬಿಸಿತ್ತು. ಕಣ್ಣು ಉಜ್ಜುತ್ತಾ ಮನೆಯೊಳಗೂ ದೀಪಗಳು ಕಣ್ಣು ತೆರೆದಿತ್ತು. ದೂರ ಬಾನಿನಲ್ಲಿ ಚುಕ್ಕಿ-ತಾರೆಗಳು, ಮರ-ಗಿಡದ ಮೈಮೇಲೆ ಮಿಂಚುಹುಳಗಳು. ಎಲ್ಲೆಡೆಯೂ ಇರುಳ ದೂಡುವ ಕಾಯಕ ಕಾಣುತಿತ್ತು. ಆದರೂ, ಅಲ್ಲೆಲ್ಲ ಕತ್ತಲು ತುಂಬಿಯೇ ಇತ್ತು. ಕಾರಿರುಳ ಕರಿನೆರಳು ನಡೆಯುತಾ ಇತ್ತು. ಗಡಿಯಾರದ ಮುಳ್ಳಿನೊಟ್ಟಿಗೇ, ಮೆಲ್ಲ ಮೆಲ್ಲಗೆ... ಹೊಸತು ನಾಳೆಯೆಡೆಗೆ.

ನಾಳೆಯೆಡೆಗೆ ನಡೆವ ದಿನದ ನಡಿಗೆ ನಿರಂತರ. ಅಲ್ಲಿಲ್ಲ ಯಾವುದೂ ಅಡ್ಡಿ, ಆತಂಕ, ಅಂತರ. ಕಾಲದ ಕಾಲಡಿ ಬಿದ್ದು ನಲುಗಿ, ಕಮರುವ ಜೀವಗಳೆಷ್ಟೋ..! ಪತರಿ, ಕಾತರಿಸುವ ಕಣ್ಣುಗಳೆಷ್ಟೋ..! ಹೆದರಿ, ನಿಲ್ಲುವ ಹೃದಯಗಳೆಷ್ಟೋ..!

ಎಷ್ಟೋ ದಿನಗಳ ಮತ್ತೆ ಅವನ ಕಣ್ಣುಗಳಲ್ಲಿ ಮಿಂಚು ಇಣುಕಿತ್ತು, ಧಮನಿಯೊಳಗೊಂದು ಸಂಚಲನ ಮೂಡಿತ್ತು, ಆ ಕರೆಗೆ, ಅವಳ ಮಾತಿಗೆ. ಕ್ಷಣಕಾಲ ಮಾತು ಮರೆತಂತಾಯ್ತು ಅವಳ ಮೌನಕೆ. ಮಾತ ಮರೆತವ ಮತ್ತೆ ತೊದಲಿದಂತೆ, ಆನಂದತುದಲಿತನಾಗಿ ಧ್ವನಿ ನಡುಗಿದಂತೆ, ಒಂದೇ ಉಸಿರಲ್ಲಿ ಮಾತಾಡಿದ. ಕಳೆದ ಕಹಿ-ಕಾರಣಗಳ ಮರೆತು ಮೊದಲಿನಂತಿರಲಾಗದೇ... ಎಂದು ಅಂಗಲಾಚಿದ. ಅರೆಕ್ಷಣ ಗದ್ಗದಿತನಾದ. ಮನದಲ್ಲೇ ಕ್ಷಮೆ ಕೋರಿದ, ಮಾತಲ್ಲದನು ಹೇಳಲಾಗದಾದ.

ಹೇಳಲಾಗದ ಮಾತ, ಅವಳೊಂದಿಗೆ ಹಂಚಿಕೊಳ್ಳಲಾರದ ಕನಸ ಪರದೆ ಸರಿಸಿದ್ದ ಅಂದೇ. ಅದೂ ಮಳೆಗಾಲದ ಇಂಥದೇ ಒಂದು ಮುಸ್ಸಂಜೆ. ಆದರೆ, ಅವನ ಆ ಮುಗ್ಧ ಮನಸಿಗೆ, ಕಣ್ಣ ಕನಸಿಗೆ ಅವಳಲ್ಲೂ ಜಾಗವಿರಲಿಲ್ಲ. ಮಳೆಯಲ್ಲಿ ನೆನೆದ ಕಣ್ಣೀರೂ ಕಾಣಲಿಲ್ಲ. ಕಾಲವೂ ಕೈಹಿಡಿಯಲಿಲ್ಲ, ಅವನನ್ನು ಸೋಲೂ ಅರ್ಥೈಸಲಿಲ್ಲ.

ಅರ್ಥೈಸಲಾಗದ ಪ್ರಶ್ನೆಗೆ ಉತ್ತರ ಪಡೆಯ ಹೊರಟವನವನು, ಅವಳಲ್ಲಿ ಅರ್ಥ ಹುಡುಕಿದ್ದ. ಮಳೆಬಿಲ್ಲ ಬಣ್ಣ ಕಂಡಿದ್ದ. ವಾಸ್ತವದ ಇರುವ ಮರೆತಿದ್ದ. ಪರರ ಪ್ರಶ್ನೆಯ ಉತ್ತರ ಸ್ವಂತವಾಗಿತ್ತು. ತನ್ನ ಪ್ರಶ್ನೆಯು ಅಲ್ಲಿ ಪ್ರಶ್ನೆಯಾಗೇ ಉಳಿದಿತ್ತು. ಪ್ರಶ್ನೆ ಇಲ್ಲದ ಉತ್ತರ ಅವಳಾಗಿದ್ದಳು. ಮತ್ತಿನ ಪ್ರಶ್ನೆಯೇ ಮರೆತಿದ್ದ. ಕೊನೆಗೂ ತನ್ನಯ ಗೆಲುವ ತಾನೇ ಸೋತಿದ್ದ..! ಉತ್ತರದ ಒಳಗಿರುವ ಪ್ರಶ್ನೆಯ ನಗುವಿನ ದುಃಖಕ್ಕೆ ಜೊತೆಯಾದ. ಜೊತೆಯಾಗಿಯೇ ಉಳಿದ. ಮತ್ತೆ ಅವಳ ನಗುಮೊಗವ ಕಾಯುತ ಕಣ್ಣ ಮುಚ್ಚಿದ್ದ.

ಮುಚ್ಚಿದ್ದ ಕಣ್ಣೆವೆಗಳನ್ನು ಬಲವಂತವಾಗಿ ತೆರೆದ. ಪಾರ್ಕ್‌ನ ಬಾಗಿಲು ಮುಚ್ಚುವ ಹೊತ್ತು. ಅಲ್ಲಿನ ಕಾವಲುಗಾರ ಎದುರು ನಿಂತಿದ್ದ. ಏರುದನಿಯಲ್ಲಿ ಎಲ್ಲರನ್ನೂ ಹೊರಹೋಗಲು ಹೇಳುತ್ತಿದ್ದ. ಚಾರ್ಜ್ ಮುಗಿದ ಫೋನ್ ಆಗಲೇ ನಿಶ್ಕ್ರಿಯವಾಗಿತ್ತು. ಅದಕೆ ಜೊತೆಯಾಯ್ತು ಅವನ ಕಳೆದ ದಿನಗಳ ಯೋಚನಾಲಹರಿ ಮತ್ತು ಪಾರ್ಕ್‌ನ ಒಳಗಿರುವ ದೀಪಕ್ಕೆ ಮುತ್ತುವ ಹಾತೆಗಳ ಕಿರಿಕಿರಿ.

Sep 11, 2009

ನೀ ನೆನಪಿನ ಅತ್ತರು; ಮನ ಮರೆಯದು ನಾ ಅತ್ತರೂ...

ಅವತ್ತಿನಿಂದಲೂ ಅವರು ಹಾಗೇ ಇದ್ದರು. ಇಬ್ಬರೂ ಸಹಕರ್ಮಿ, ಸಹಮಿತ್ರರು. ಹಾಗೇ ಜೊತೆ ಸಾಗುತ್ತಿರುವ ಅವರ ಓದೂ. ಓದುವ, ಕಲಿಯುವ ಮತ್ತು ಕಾಯಕದ ಜೀವನ ಅವರದು. ಕೆಲವೊಮ್ಮೆ ತಡರಾತ್ರಿಯವರೆಗಿನ ಕೆಲಸ, ಮುಂಜಾವಿನ ಆ ತರಗತಿ. ಅಲ್ಲಿಗೆ ಇಡೀ ದಿನ ಮುಗಿದ ಹಾಗೇ..! ಆಗ ವರ್ಷಗಳ ಹಿಂದಿನ ಕಾಲೇಜು ಜೀವನ ಮತ್ತೊಮ್ಮೆ ಕಣ್ಮುಂದೆ ನಿಲ್ಲುವುದಿತ್ತು. ಜೊತೆಗೆ ಜೀವಿತದ ಪ್ರಶ್ನೆಯೂ ನೆನಪಿಸುತ್ತಿತ್ತು, ವಾಸ್ತವದ ನಾಳೆಯನ್ನೂ... ಹಾಗೇ.

ಹಾಗೇ ಕಳೆಯುತ್ತಿತ್ತು ದಿನ... ದಿನಾ. ಬಹುಶಃ ಅದವನ, ಅವಳ ಜೊತೆ ಇರುವ, ಆಫೀಸಿನಲ್ಲಿನ ಕೆಲಸದ ಕೊನಯ ದಿನ. ಮರುದಿನದಿಂದ ಅಲ್ಲೆಲ್ಲಾ ಅವನು ನೆನಪಷ್ಟೇ. ನನ್ನಲ್ಲೂ ಅಷ್ಟೇ. ಏನಾದರೂ ಅಗತ್ಯದ ವಿಷಯಕ್ಕೆ ಬಿಟ್ಟರೆ, ಮತ್ಯಾಕೂ ಅವನಿಗೆ ಕರೆಮಾಡುತ್ತಿರಲಿಲ್ಲ, ಮತ್ಯಾರೂ ಕೂಡ. ನೀರ ಮೇಲೊಂದು ಅಲೆ ಬಂದು ಹೋದ ಹಾಗೆ. ಹೋದವನನ್ನು ನೆನೆಸಿ ಪ್ರಯೋಜನವಾದರೂ ಏನುಂಟು..? ಎಲ್ಲಾ ಕಛೇರಿ, ಕಾರ್ಯಗಳಲ್ಲೂ ಇದು ಸಹಜ, ಉಂಟೇ ಉಂಟು. ದಿನ ಕಳೆದಂತೆ, ಹೊಸ ಜನರು ಸೇರಿದಂತೆ, ಅವನು ದೂರವಾಗುತ್ತಾ ಹೊದ, ನನ್ನ ಕಣ್ಣಿನಿಂದ, ನಮ್ಮ ಮನಸಿನಿಂದ.

ಮನಸಿಲ್ಲದ ಮನಸಿನಿಂದ, ಆ ದಿನ, ಆಫೀಸಿನ ಕೊನೆಯ ದಿನ ಸಂಜೆ ನಮ್ಮೆಲ್ಲರಿಗೂ ಕಣ್ತುಂಬಿ, ಕೈಯೆತ್ತಿ ವಿದಾಯ ಹೇಳಿದ್ದ. ಮನಸ್ಸು ಸ್ವಲ್ಪ ಭಾರವಾಗುವಂತೆ ಮಾಡಿದ್ದ. ಅಂದು ಅವಳೂ ಸಹ ಏನೋ ಗಿಫ಼್ಟ್ ಕೊಟ್ಟಿದ್ದಳು, ಮನಃಪೂರ್ವಕ. ಮತ್ತೆ ಅಲ್ಲಿ ತುಂಬಿದ್ದು ನಮ್ಮ ಮಾತಿನ, ಕಣ್ಣ ನೋಟದ ಮೆಲು ಮೌನ. ಮೆಲ್ಲಗೆ ಬೆಳಕು ದೂರವಾಗುತ್ತಿತ್ತು, ಅದರೊಂದಿಗೆ ನಮ್ಮೆಲ್ಲರ ಹೆಜ್ಜೆಗಳೂ ಬೇರೆ ಬೇರೆಯಾಗುತ್ತಿತ್ತು ಮತ್ತು ನೆನಪುಗಳೂ, ಒಂದೊಂದಾಗಿ... ಅವನಿಂದ.

ಅವನಿಂದ ಮತ್ತೆಂದೂ ಕರೆಯಾಗಲೀ, ಸಂದೇಶಗಳಾಗಲೀ ಬರಲೇ ಇಲ್ಲ. ನಾವೂ ಪ್ರಯತ್ನಿಸಿರಲಿಲ್ಲ. ಆ ಧಾವಂತ, ಅದೇ ಕೆಲಸ, ಮಸುಕು ದೀಪ, ಅದೇ ಕಾಫಿ, ಗದ್ದಲ, ಒಮ್ಮೊಮ್ಮೆ ಗದರಿಕೆ, ತಪ್ಪು ಕೆಲಸಕ್ಕೆ ಬೈಗುಳ, ಕೈಕೊಡುವ ಕರೆಂಟು, ಸೀನು ತರುವ ಧೂಳು.. ಯಾರೋ ನೆನೆಸುತ್ತಿದ್ದಾರೆ ಎಂದುಕೊಂಡು ಕೆಲಸಕ್ಕೆ ಜಾರುವ ನಾವು. ಅಷ್ಟಾದರೂ ಅವನನ್ನು ಎಂದೂ ನೆನಪಿಸಿಕೊಳ್ಳುತ್ತಿರಲಿಲ್ಲ, ಅದರ ಅಗತ್ಯವೂ ಇರುತ್ತಿರಲಿಲ್ಲ.

ಇಲ್ಲ ಎಂದು ಅದೆಷ್ಟು ದಿನಗಳಾಗಿತ್ತೋ..? ಒಂದು ದಿನ ಹಾಗೇ ಎದುರು ಸಿಕ್ಕಿದ್ದ. ಕಾಫಿ ಹರಟೆಗೆ ಮಾತ್ರ ಸಮಯವಿದ್ದದ್ದು. ಮತ್ತೆಂದೂ ಅವನನ್ನು ಕಾಣುವ, ನೆನಪಿಸಿಕೊಳ್ಳುವ ಪ್ರಮೇಯ ಬರಲೇ ಇಲ್ಲ.

ಬರಲಿಕ್ಕಿಲ್ಲ ಅಂದುಕೊಂಡಿದ್ದೆ ಅವನ 'ಬ್ಲಾಗ್ ಬರಹ’ ಓದುವವರೆಗೆ..! ಅಂದಿನ ಆ ಕಥೆಯಲ್ಲೇನೋ ಹೊಸತಿತ್ತು. ಅವನ ಬಗ್ಗೆ ಗೊತ್ತಿರುವವರಿಗೆ ಗೊತ್ತಾಗುವ ಗುರುತುಗಳಿತ್ತು. ಸತ್ಯ ಸಂಗತಿಯಿತ್ತು, ಅಲ್ಲಿ ಅವನೇ ಕಥೆಯಾದಂತಿತ್ತು. ಮತ್ತೆ ಅವನ ನೆನಪೇ ನನ್ನಲ್ಲಿ ತುಂಬಿತು, ಆ ಕಥೆ... ಅವನು... ಅವಳು.

ಅವಳು, ಅವನ ಮನದಲ್ಲಿ ತುಂಬಿರುವಳು, ಮಧುರ ಅನುಭಾವದ ಮುದವಾದ ನೆನಪು ತರುವವಳು, ಸಿಹಿಕನಸ ಜೊತೆಗೆ ನಿದಿರೆ ಮರೆಸುವವಳು.., ಇದ್ಯಾವುದೂ ಅಲ್ಲವೇ ಅಲ್ಲ. ಅವನಿಗೆ ಹೇಳಲಾಗದ, ಭಾವನೆಗಳಲ್ಲಿ ಹಿಡಿದಿಡಲಾಗದ, ಮನದಿಂದ ಮರೆಯಲೂ ಆಗದ ತರಳೆ ಅವಳಾಗಿದ್ದಳು. ಬಿರುಬಿಸಿಲ ನಡುದಿನದ ಹಿತ ನೆರಳೇ ಆಗಿದ್ದಳು, ಹುಣ್ಣಿಮೆಯ ಸಿಹಿಬೆಳಕ ಇರುಳೇ ಆಗಿದ್ದಳು... ಅವಳು.

ಅವಳು ಎಲ್ಲರೊಂದಿಗೂ ಬೆರೆಯುವವಳು, ನಗು ಹಂಚುತ ನಗುವವಳು. ಇಬ್ಬರೂ ಆಫೀಸಿನಲ್ಲಿ ಜೊತೆಯಾಗಿಯೇ ಇರುತ್ತಿದ್ದರು. ಜೊತೆಯಲ್ಲೇ ಕೆಲಸವೂ ಸಹ, ಊಟ, ಜಗಳವೂ... ಒಮ್ಮೊಮ್ಮೆ. ದಿನವೂ ಹೊಸತನ ಎನಿಸುವ ದಿನಗಳು ಅಲ್ಲಿತ್ತು. ಬಿಸಿಲು-ಮಳೆ ಜೊತೆಯಂತೆ, ರಾತ್ರಿ-ಮಿಂಚುಹುಳದಂತೆ, ಕನಸಿನೊಳಗಿನ್ನೊಂದು ಕನಸಿನಂತೆ. ಆಫೀಸು ಬಿಡುವವರೆಗೆ, ನಮ್ಮಿಂದ ದೂರಾಗುವವರೆಗೆ.

‘ದೂರ’ವೇ ಮನಸ್ಸನ್ನು ‘ಹತ್ತಿರ’ವಾಗಿಸುವುದಂತೆ. ಹತ್ತಿರದವರನ್ನು ಅರಿಯುವುದೂ ದೂರವಾದಮೇಲೆಯೇ. ಅದು ‘ಭಾವನೆ’ಯ ‘ದೃಷ್ಟಿ’ಯನ್ನೆ ಬದಲಿಸಿಬಿಡಬಹುದು. ಆಲೋಚನೆಯ ಆಂತರ್ಯವನ್ನು, ಸ್ನೇಹದ ಸಾಂಗತ್ಯವನ್ನೂ. ಹಾಗೆಯೇ ಇಲ್ಲಿಯೂ. ಅವತ್ತಿನಿಂದ ಮನದ ಮಾತು ಅವಳಲ್ಲಿ ಹೇಳಿ ಮನಸು ಹಗುರಮಾಡಬೇಕೆಂದು ಪಟ್ಟ ಪ್ರಯತ್ನಗಳೆಷ್ಟೋ..? ಆದರೆ ಮಾತಾಡಲು ಮಾತೇ ಬಾರದು. ಹೇಳಲೂ ಆಗದೆ, ಮನಸ್ಸಲ್ಲೇ ಮುಚ್ಚಿಡಲೂ ಆಗದೆ ನೊಂದ ದಿನಗಳೆಷ್ಟೋ..? ಕೊನೆಗೂ ಒಂದು ದಿನ, ಕಣ್ಮುಚ್ಚಿ, ಕಹಿ ಮದ್ದು ಕುಡಿದ ಹಾಗೆ, ಒಂದೇ ಉಸಿರಿನಲ್ಲಿ ಹೇಳಿದ, ಮನಸ ಹಗುರವಾಗಿಸಿದ. ಖುಷಿಯಿಂದ ಸಂಭ್ರಮಿಸಿದ.

ಸಂಭ್ರಮ ಅವನ ಪಾಲಿಗಂತೂ ಉಳಿಯಲೇ ಇಲ್ಲ. ಪ್ರತಿಯೊಬ್ಬರಿಗೂ ಅವರದೇ ಒಂದು ಪ್ರಪಂಚವಿರುವುದು. ಅದರ ಬಾನಿನ ತುಂಬ ಅವರದೇ ಕನಸು, ಹುಚ್ಚು ಕಲ್ಪನೆಯ ಮೋಡವಿರುವುದು. ನಡು ಬೇಸಿಗೆಯಲ್ಲಿ ಅನ್ಯರ ಆಶಯಕೆ ಅಲ್ಲಿ ಮಳೆ ತರಲು ಸಾಧ್ಯವೇ..? ಪರರ ಬಯಕೆಗೆ ಅಲ್ಲಿ ಮಿಂಚು ಮಿಂಚಲು ಸಾಧ್ಯವೇ..? ಅವನ ಆಸೆಯ ಗಿಡಕೆ ಅಲ್ಲಿ ಬೇರು ಬಲಿಯಲು ಸಾಧ್ಯವೇ..? ಮೊಗ್ಗು ಅರಳಲು ಸಾಧ್ಯವೇ..? ಬಣ್ಣದ ಚಿಟ್ಟೆಯ ರೆಕ್ಕೆಯನ್ನು ಮುಟ್ಟುವ ಕನಸಿಗೆ ಉಸಿರು ಇನ್ನೆಲ್ಲಿ..? ಕಮರಿ ನೆಲಸೇರುವುದಲ್ಲದೆ ಏನೂ ಉಳಿದಿರದು ಅಲ್ಲಿ..! ಬಹುಶಃ ಅವಳ ಪ್ರಪಂಚದಲ್ಲೂ ಕನಸೊಂದು ಇದ್ದಿರಬಹುದು. ಅವನ ಕಲ್ಪನೆಗೆ ನಿಲುಕದ ನಿಜ ಬೇರೊಂದಿರಬಹುದು ಅಥವಾ ಕನಸ ತಾರದ ಕ್ರೂರ ಕಹಿ ಇರುಳೂ ಇರಬಹುದು. ಮತ್ತೆಂದೂ ಅವಳು ಅವನಲ್ಲಿ ಮೌನ ಮುರಿದದ್ದೇ ಇಲ್ಲ. ಅವನ ಕನಸ ಹಕ್ಕಿ ರೆಕ್ಕೆ ಬಿಚ್ಚಿದ್ದೂ ಇಲ್ಲ. ಹೊಸ ಆಸೆ ಹೊತ್ತು, ಉತ್ತರವ ಕಾಯುತ ಕುಳಿತ ಅವನ ಪ್ರಶ್ನೆಯ ಕಣ್ಣೆವೆಗಳು ಮತ್ತೆಂದೂ ತೆರೆಯಲೇ ಇಲ್ಲ. ಅವನು ಮತ್ತೊಮ್ಮೆ ಸೋತಿದ್ದ, ಅವನದೇ ಪ್ರಪಂಚದಲ್ಲಿ. ಹಾಗೇ, ಮನದ ಮಾತಿಗೆ ಸೋತು ಆ ಮನಸ ನೋಯಿಸಿದೆನೇ..? ನವಿರು ಭಾವನೆಯ ಭಾವ ಮುರಿದೆನೇ..? ಕಾಣದ ಕನಸ ಕೈಯಾರೆ ಕೊಂದೆನೆ..? ಎಂಬೆಲ್ಲಾ ವೇದನೆಯೂ ಮನೆ ಮಾಡಿತು ಅವನ ಮನದಲ್ಲಿ.

ಮನದಲ್ಲಿ ಅವನ ಕಥೆಯದ್ದೇ ಬೆಚ್ಚನೆಯಿತ್ತು ಆಫೀಸು ಹುಡುಗ ಕಾಫಿ ತಂದಿಡುವವರೆಗೆ. ಮನ ತುಂಬಿ ಒಂದು ನಿಟ್ಟುಸಿರು. ಒಂದು ಗುಟುಕು ಕಾಫಿ ಕುಡಿದಾಗ ಏನೋ ಉಲ್ಲಾಸ. ಮನದಿಂದ ದೂರವಿದ್ದವನು ಮತ್ತೆ ಹತ್ತಿರವಾಗಿದ್ದ, ದೂರವಾಗದಿರುವಷ್ಟು. ಕಿಟಕಿಯ ಬಳಿ ನಿಂತು, ಹೊರಗೆ ಮಾಡಿನ ಮೂಲೆಯಲ್ಲಿ ಜೊತೆಯಿದ್ದ ಎರಡು ಗುಬ್ಬಚ್ಚಿಗಳನ್ನು ನೋಡುತ್ತಾ ಅವನ ಕಥೆಯ ಜೊತೆಯಾದೆ... ಆ ಕೊನೆಯ ಸಾಲನ್ನು ಮತ್ತೊಮ್ಮೆ ನೆನಪಿಸಿದೆ, ನನ್ನಷ್ಟಕ್ಕೇ, ಮೆಲುದನಿಯಲ್ಲಿ "ನೀ ನೆನಪಿನ ಅತ್ತರು; ಮನ ಮರೆಯದು ನಾ ಅತ್ತರೂ..."

ಅವತ್ತಿನಿಂದಲೂ ಅವಳು ಹಾಗೇ ಇದ್ದಳು... ಇವತ್ತೂ...

Jun 22, 2009

‘ಅವಳು’ - ಅದವನ ದಿನಚರಿಯ ಹೆಸರು

ಮಳೆಗಾಲದ ಮಳೆ ಅದು. ಗಾಳಿ ಬೀಸಿದಾಗ ಮಂಜು ತುಂಬಿ ಕೈ ಅಳತೆಯ ಅಂತರವೂ ಕಾಣದಾಗುವುದು. ಮಲೆನಾಡಿನ ವಿಶೇಷವೇ ಅಂಥದು. ಮಳೆ ಶುರುವಾಗುವ ಮುಂಚೆಯೂ ಮಂಜು, ಮಳೆಗಾಲ ನಿಂತ ಮೇಲೂ. ಅಂಥಾ ಮಳೆಗಾಲದಲ್ಲಿ ಜೊತೆ ಸೇರಿದ ಗೆಳೆಯರಲ್ಲಿ ಹೊಳೆದ ಐಡಿಯಾ ‘ಮಾನ್ಸೂನ್ ಚಾರಣ’. ಯಾವ ಕಡೆ..? ಹತ್ತಿರ ಎಲ್ಲಾದರೂ ಹೋಗುವ ಮನಸು, ದೂರವೂ ಆಗಬಹುದೆಂಬ ಮನಸು ಕೆಲವರದ್ದು. ಕೊನೆಗೂ ಹೊರಟೆವು ಬೇಕಲ ಕೋಟೆಗೆ, ಕಾಸರಗೋಡಿನ ಕಡೆಗೆ.

ಕಡೆಗೆ ಹೊಳೆದ ಜಾಗವೇ ಎಲ್ಲರಿಗೂ ಇಷ್ಟವಾದದ್ದು. ನನಗೂ ಸಹ. ಬೇರೆ ಬೇರೆ ಊರಿನಿಂದ ಜೊತೆ ಬರುವವರಿದ್ದರು. ಆದ್ದರಿಂದ ಹೊರಟದ್ದು ಚಾರ್ಮಾಡಿ, ಮಂಗಳೂರಾಗಿ ತಿರುಗಿ ಕಾಸರಗೋಡಿನೆಡೆಗೆ, ಒಂಥರಾ ಖುಶಿ ಕೊಡುವ ನಡಿಗೆ. ಎಲ್ಲಾ ಬೈಕುಗಳಲ್ಲೂ ಇಬ್ಬಿಬ್ಬರು. ಮಳೆ, ಚಳಿ ಇದ್ದರೂ, ಸಂತೋಷದಲ್ಲಿದ್ದರು, ಪ್ರತಿಯೊಬ್ಬರೂ, ಅಲ್ಲಿದ್ದ, ಬಂದಿದ್ದ ಬೇರೆಯವರೆಲ್ಲರೂ.

ಬೆರೆಯವರಿಂದ ಬೇರೆಯಾಗಿ ನಾವೆಲ್ಲ ಸ್ವಲ್ಪ ದೂರ ನಿಂತೆವು. ಬೆನ್ನ ಚೀಲಗಳನ್ನು ಕೆಳಗಿರಿಸಿ, ದಣಿವಾರಿಸಿ, ಬೇಕಲದ ಸೌಂದರ್ಯ ಸವಿಯಲು ಹೊರಟೆವು. ಹಾಗೆ ತಿರುಗಾಡುತ್ತಿರುವಾಗ, ಎದುರಿನಿಂದ ಬರುವ ಗುಂಪಿನಲ್ಲಿ ಒಬ್ಬನನ್ನು ಅಕಸ್ಮಾತ್ ಆಗಿ ಗುರುತಿಸಿದೆ. ಅವ ಒಂದು ಕಾಲದ ಮಿತ್ರ, ದೂರವಾಗಿದ್ದ, ಈಗ ಮತ್ತೆ ಹತ್ತಿರ.

ಹತ್ತಿರ ಬಂದ ಕೂಡಲೇ ಬರಸೆಳೆದು ಅಪ್ಪಿದ. ನಿಮಿಷಗಳವರೆಗೂ ಅಲ್ಲಿ ಬರಿಯ ಮೌನವೇ ಉತ್ತರ. ಜೊತೆಗಾರರಿಗೆಲ್ಲ ಅವನ ಪರಿಚಯ ಮಾಡಿಸಿ, ಅವರನ್ನೆಲ್ಲ ಮುಂದೆ ಹೋಗಲು ಹೇಳಿ, ನಾವಿಬ್ಬರೂ ಅಲ್ಲೇ ಇದ್ದು ಬಿಟ್ಟೆವು. ಕ್ಷಣಕಾಲ ಮರೆತು ಬಿಟ್ಟೆವು. ಬೇರೆಯವರನ್ನು, ಬೇಕಲವನ್ನು, ವಾಸ್ತವವನ್ನೂ.

ವಾಸ್ತವವನ್ನು ಮತ್ತೆ ನೆನಪಿಸಿದ್ದು ಸಣ್ಣ ಮಳೆ. ಒದ್ದೆಯಾಗದಂತೆ ಹಾಗೆ ಸ್ವಲ್ಪ ಬದಿಗೆ ಬಂದು ಕುಳಿತೆವು. ಮತ್ತೆ ಹೊಸ ವಿಷಯಗಳ ಬಗ್ಗೆ, ನನ್ನ ಬಗ್ಗೆ ಮಾತಾಡಿ, ಒಂದು ವಿಷಯದಲ್ಲಿ ನಿಂತೆವು... ಅವನ ದಿನಚರಿಯ ಪುಸ್ತಕದಲ್ಲಿ. ಅದರ ಹೆಸರೇ ಹಾಗಿತ್ತು. ಹಾಗೆ ಅವನ ಮನದ ಮಾತೂ ಶುರುವಾಗಿತ್ತು.

ಶುರುವಾಗಿತ್ತು ಅವರ ಸ್ನೇಹ ಅಂದು ನನ್ನಿಂದಲೇ. ಅದೆಷ್ಟು ಅವರಿಗೆ ನೆನಪಿರುವುದೋ ಗೊತ್ತಿಲ್ಲ, ನಾನಂತೂ ಮರೆತಿಲ್ಲ ಆ ದಿನವನ್ನು, ಆಕೆಯನ್ನು ಅವನಿಗೆ ಪರಿಚಯಿಸಿದ ಆ ಘಳಿಗೆಯನ್ನು. ಮತ್ತೆ ನಾನೂ ಅಲ್ಲಿ ನಿಂತಿರಲಿಲ್ಲ. ಅವರಿಬ್ಬರನ್ನೂ ಬಿಟ್ಟು ಹೊರಟಿದ್ದೆ.ಮತ್ತಿನ ವಿಷಯ ನನಗೂ ತಿಳಿದಿರಲಿಲ್ಲ. ಚಾರಣದ ದಿನದವರೆಗೆ, ಮುಖತಃ ನಾವು ಭೇಟಿಯಾಗುವವರೆಗೆ. ಅವತ್ತಿನಿಂದ ಅವರಿಬ್ಬರೂ ಹತ್ತಿರವಾಗಿದ್ದರು. ಮತ್ತೆಂದೂ ನಾನು ಅವನನ್ನಾಗಲೀ, ಅವಳನ್ನಾಗಲೀ ಭೇಟಿ ಮಾಡಿದ್ದೇ ಇಲ್ಲ.

ಇಲ್ಲ ಎಂದಲ್ಲ. ಎಷ್ಟೋಸಲ ಮೂಡಿಗೆರೆಗೆ ಹೋಗಿದ್ದರೂ, ಅವರ ಊರಿಗೆ ಹೋಗಲು ಆಗಲೇ ಇಲ್ಲ. ಅದೆಷ್ಟೋ ವರ್ಷದ ನಂತರ ಮತ್ತೆ ಜೊತೆಯಾದೆವು. ಜೊತೆಗೇ ಸಾಗಲಾರಂಭಿಸಿತು ಅವನ ನೆನಪಿನ ದೋಣಿಯ ಹುಟ್ಟು, ಅವನ ಆ ಕನಸಿನಂತಿದ್ದ ಡೈರಿಯ ಪುಟ ಪುಟದ ಗುಟ್ಟು. ಹೇಳಲಾರಂಭಿಸಿದ ಒಂದೊಂದಾಗಿ ತೆರೆದಿಟ್ಟು .

ತೆರೆದಿಟ್ಟದ್ದು, ಅಂದು ಅವರು ಪರಿಚಯವಾದ ನಂತರದ ಸಂಗತಿ. ಗೋಡೆಯಲ್ಲಿ ಬೆಳೆದ ಹುಲ್ಲನ್ನು ಮೆಲ್ಲಗೆ ಒಂದೊಂದಾಗಿ ಕೀಳುತ್ತಾ ಮಾತು ಮುಂದುವರೆಸಿದ. ಅದರಡಿಯಲ್ಲಿ ಎಂದೋ ಗೂಡು ಕಟ್ಟಿದ್ದ ಇರುವೆಗಳೂ ಒಂದೊಂದಾಗಿ ಹೊರಬರಲಾರಂಭಿಸಿತು. ಹಾಗೆಯೇ..., ಮನದ ಕನಸುಗಳು, ಡೈರಿಯ ಪ್ರತಿ ಪುಟದ ಸಾಲುಗಳು, ನಾನರಿತಿರದ ಅವನು.

ಅವನ ಬದುಕಿನ ರೀತಿಯೇ ಅಂಥದು. ಶಿಸ್ತು, ಸಂಯಮ, ನೀತಿ, ವೈಚಾರಿಕತೆ. ಎಲ್ಲಕ್ಕಿಂತ ಮಿಗಿಲಾಗಿ ಸಹಜತೆ. ಅವನ ದೃಷ್ಟಿಯಲ್ಲಿ ಬಹುವಚನವೆಂದರೆ - ದೂರ, ಗೌರವ, ಭಯ, ಅಪ್ಪ, ಸಮಾಜ, ಮಾತು. ಇನ್ನು ಏಕವಚನ - ಸಾಮೀಪ್ಯತೆ, ಆಪ್ಯಾಯತೆ, ಪ್ರೀತಿ, ಅಮ್ಮ, ಸನಿಹವರ್ತಿ, ಮೌನ. ಅದೇ ಅವನ ಜೀವಿತದ ಯಾನ. ಅಂಥ ಯಾನದಲ್ಲಿ ಸನಿಹವಾದವರಲ್ಲಿ ಆಕೆಯೂ ಒಬ್ಬಳು. ಏಕವಚನದಿಂದ ಮತ್ತೆ ಬಹುವಚನವಾದವಳು ಅವಳು.

‘ಅವಳು’ - ಅವನ ಡೈರಿಯ ಹೆಸರೂ ಸಹ. ಸಹಜ ಪ್ರೀತಿ ಅವರಿಬ್ಬರಲ್ಲೂ ಇತ್ತು. ಅವರಲ್ಲಿ ಏಕಾಂತವಿತ್ತು. ಮೌನದಲ್ಲೇ ಅರ್ಥ ನೂರಿತ್ತು. ಮನಸಿನೊಳಗೆ ಹೇಳದ ಒಂದು ತಹತಹಿತವಿತ್ತು. ಜಗದ ಜೀವಿತವ ಹಿಂದೆ ದೂಡುವ ಕನಸ ರೆಕ್ಕೆ ನಾಲ್ಕಿತ್ತು. ಆಸೆಯ ಅನುಭಾವವಿತ್ತು. ಅಂತಹಾ ಸುಂದರ ಸಾಮೀಪ್ಯತೆ, ಅರ್ಥೈಸಲಾಗದೆ ಅರ್ಥ ಕಳೆದುಕೊಂಡಿತ್ತು. ಅರ್ಥ ತುಂಬುತ ಅವನ ಡೈರಿ ಸೇರಿತ್ತು. ಆ ಪ್ರೀತಿ ಮರಳಿ ಬಹುವಚನವಾಯ್ತು. ಸಮಯದ ಮುಳ್ಳ ಹಿಂದೆ ಮರೆಯಾಯ್ತು.

ಮರೆಯಾಯ್ತು, ನೀರ ಅಲೆ ದಡಕ್ಕೆ ಬಡಿದು, ನಮ್ಮ ಪಾದಗಳಿಗೆ ಉಪ್ಪು ನೀರನ್ನು ಹೊಡೆದು. ಮಾಮೂಲಿಗಿಂತ ಒಂದು ದೊಡ್ಡ ಅಲೆ ಎಸೆದು, ಕಾಣದಾಯ್ತು ಮತ್ತೊಂದು ಅಲೆಯೊಡನೆ ಬೆಸೆದು. ಮರಳಲ್ಲಿ ಮಕ್ಕಳು ಕಟ್ಟಿದ್ದ ಅರಮನೆಯನ್ನೆಲ್ಲಾ ತೊಳೆದು, ಮರಳಿತು ತೀರವನ್ನು ಅಪ್ಪಿದ ಸಿಹಿ ಅನುಭವವ ಹಿಡಿದು.

ಹಿಡಿದು ಮರಳನ್ನು ಕೈತುಂಬಾ ಮತ್ತೊಮ್ಮೆ ಅರಮನೆ ಕಟ್ಟುತ್ತಿರುವ ಮಕ್ಕಳು, ಬೇಕಲದ ಚಾರಣದ ಖುಶಿ ತುಂಬಿದ ಗೆಳೆಯರು, ತೆರೆಯ ಮೇಲೊಂದು ತೆರೆಯ ದಡಕೆ ನೂಕುವ ಪ್ರಶಾಂತ ಕಡಲು, ಸೂರ್ಯನ ಮರೆಮಾಚುತ್ತಿರುವ ಅಗಾಧ ಕರಿಮುಗಿಲು, ಕರಗಿಹೋಗುತ್ತಿತ್ತು ಕಣ್ತುಂಬಿ ಕುಳಿತ ಮಿತ್ರನ ನೆರಳು, ಜೊತೆಗೆ ಆ ದಿನಚರಿಯ ಪುಟ ಪುಟದ ಮೆಲುಕು...,ಹಳತು, ಹೊಸತು.

ಹೊಸತನದ, ಹೊಸಜಗದ, ಹೊಸತು ತೇದಿಯ ಕಡೆಗೆ, ಹೊಸ ಪಯಣ ಹೊರಟ ಜೊತೆಗಾರರು, ಕಡಲ ಕೂಗಿನ ಅಲೆಗಳು, ಆ ಮಿತ್ರನ ಮನದ ಏರಿಳಿತಗಳು... ನನ್ನಲ್ಲಿ, ‘ಅವಳು’ - ಅವನ ಡೈರಿಯ ಪಲುಕು, ಪುಳಕಗಳ ಮಾಸದ ನೆನಪುಗಳು, ಇದಕ್ಕೆಲ್ಲ ಕಾರಣವೂ ನಾನೇ ಎಂಬ ನಿಶ್ಯಬ್ದ ನೋವಿನ ಗೆ. ರೆ. ಗ. ಳು. . . !

Jun 7, 2009

ಮನಸ್ಸು ಮುರಿದರೂ ಸರಿ ಬಿಡು; ಮನಸ್ಸಲ್ಲಿರುವದ್ದು ಮಾತ್ರ ಹೇಳಿಬಿಡು..

ಮೊನ್ನೆ ಮಂಗಳೂರಿನ ಅಂಗಳದಲ್ಲಿದ್ದೆ. ಜೊತೆಯಿತ್ತು ಅಂದಿನ ಹಳೆ ನೆನಪುಗಳು. ಅದೇ ದಾರಿ; ಅಲ್ಲಿ ಹೊಸತನವಿತ್ತು. ಅದೇ ಮಾರ್ಕೆಟ್; ಗುರುತು ಸಿಗದಂತಿತ್ತು. ಅದೇ ಫುಟ್‌ಪಾತ್; ಮರದ ನೆರಳು ಕಾಣದಾಗಿತ್ತು. ಅದೇ ಸೆಖೆ, ಅದೇ ಮೀನು ವಾಸನೆ... ಎಲ್ಲಾ ಹತ್ತು ವರ್ಷದ ಹಿಂದಕ್ಕೆ ನನ್ನನ್ನು ದೂಡಿತು. ನೆನಪು ನೂರೊಂದು ಬಂದು ಹೋಯಿತು. ಕಾಲು ಮಾತ್ರ ನಿಲ್ಲದೇ ಸಾಗುತ್ತಿತ್ತು.

ಸಾಗುತ್ತಿತ್ತು.... ನಿಂತಿತು. ನಡೆವವರ ನಡುವಲ್ಲಿ ನನ್ನ ದೃಷ್ಟಿ ನಿಂತಿತು. ಪರಿಚಿತ ಮುಖ...ಮರೆತ ಮುಖ... ನೆನಪಾಯ್ತು. ನಾವಿಬ್ಬರೂ ಒಂದೇ ಶಾಲೆಯಲ್ಲಿ ಓದಿದ್ದೆವು. ಜೊತೆಗೇ ಪರೀಕ್ಷೆ ಬರೆದಿದ್ದೆವು. ತುಂಬಾ ನಗು, ಕೆಲವೊಮ್ಮೆ ಸ್ವಲ್ಪ ಅಳು ಹಂಚಿಕೊಂಡಿದ್ದೆವು... ಮರೆತಿದ್ದೆವು. ಆದರೆ... ಆ ದಿನಗಳನ್ನಲ್ಲ.

ಆಗಲೇ “ ಓ... ಸಯ್ಯರ ಎನ್ನ ಗಾಡಿಯೇ ಆವೋಡಾ ?" ಟ್ರಾಫ಼ಿಕ್ ಒಳಗೆ ಏಕಾಏಕಿ ನುಗ್ಗಿದರೆ ಯಾರು ತಾನೆ ಬಯ್ಯಲಿಕ್ಕಿಲ್ಲ...? ಹ್ಞೂಂ. ಅಷ್ಟೇ ಬಯ್ದದ್ದು ನನ್ನ ಪುಣ್ಯ. ಇದೆಲ್ಲ ಮಾಮೂಲಿ ಪೇಟೆಯಲ್ಲೆಲ್ಲಾ. ಅಂತೂ ಅವನ ಕೈ ಹಿಡಿದು ಬದಿಗೆ ಎಳೆದು ತಂದು ನಿಲ್ಲಿಸಿದೆ. ಅವನಂತೂ ಪೂರಾ ತಬ್ಬಿಬ್ಬು. ಅಷ್ಟರಲ್ಲೇ ಅಲ್ಲಿಗೆ ಬಂದ ಇಬ್ಬರು ಮಕ್ಕಳು ನನ್ನ ಕೈ ಹಿಡಿದರು. ಈಗ ತಬ್ಬಿಬ್ಬು ನಾನು. " ಎಂತ ಮಾರಾಯ ನೀನು ಇಲ್ಲಿ..? " ಇಬ್ಬರದೂ ಒಂದೇ ಉದ್ಗಾರ..! ನನ್ನ ಎರಡು ಪಟ್ಟು ಆಶ್ಚರ್ಯ ಅವನದ್ದು.

ಅವನದ್ದು ಒಂದೇ ಒತ್ತಾಯ. ಸರಿ . ಒಪ್ಪಿ ಹೊರಟೆ. ಅವನ ಮನೆಗೆ, ಅವನೊಟ್ಟಿಗೆ, ಅವನ ಮಕ್ಕಳೊಟ್ಟಿಗೆ. ಅದು ಸಂಜೆ ಕಾಫ಼ಿಯ ಹೊತ್ತು. ನಮಗೆ ಅದು ಊಟದ ಹೊತ್ತು, ಹಸಿವೂ ಸಹಾ ಇತ್ತು. ಅಷ್ಟೆ ಸ್ವಲ್ಪ ಹೊತ್ತು. ಹೊರಗೆ ಸುರಿವ ಬಿರುಮಳೆ. ಒಳಗೆ ಬಿಸಿ ಕಾಫ಼ಿಯ ಹೊಗೆ. ಅವನ ಹಳೆ ನೆನಪುಗಳ ಕೆದಕಿದೆ ಒಮ್ಮೆ ಸುಮ್ಮನೆ ಹಾಗೆ.

ಹಾಗೆ... ಹೇಗೆ ? ಕಾಫಿಯೂ ಸ್ವಲ್ಪ ಮಟ್ಟಿಗೆ ನಿಜ ಕಕ್ಕಿಸುತ್ತದೆ, ಗಂಗಸರದ ಹಾಗೆ. ಮುಂದಿನ ಅವನ ಮಾತೆಲ್ಲ ನನಗೆ ಕನಸಿನಂತೆ.

ಕನಸಿನಂತೆ... ಆ ದಿನಗಳಲ್ಲಿ ಅವನ ಜೀವನದಲ್ಲವಳು ಬಂದಿದ್ದಳು...ಕನಸಿನಂತೆ. ಪುರುಸೊತ್ತಿರುವಾಗೆಲ್ಲ ಅವನನ್ನು ಕೆಣಕುವುದೇ ನಮ್ಮ ಕೆಲಸ. ಅವರಿಬ್ಬರ ಬಗ್ಗೆ ಮಾತನಾಡದಿದ್ದ ದಿನ, ಏನೊ ನಿದ್ರೆ ಸರಿಯಾಗಿ ಬಾರದು. ಅಷ್ಟು ತಮಾಷೆ ಅಲ್ಲಿತ್ತು. ಜೊತೆ ಇದ್ದ ದಿನಗಳೆಲ್ಲಾ ಬಲು ಸಿಹಿಯ ಕ್ಷಣಗಳಾಗಿತ್ತವನಿಗೆ. ಒಟ್ಟಿಗೇ ಬರೆದ ಪರೀಕ್ಷೆ, ಒಟ್ಟಿಗೇ ಸುತ್ತಿದ ಕಾಲೇಜು, ಒಟ್ಟಿಗೇ ಸೋತ ಸ್ಪರ್ಧೆ, ಒಟ್ಟಿಗೇ ಕುಡಿದ ಕಾಫಿ... ಇನ್ನು ಎಷ್ಟೋ ಕನಸು ಒಟ್ಟಿಗೇ...! ಅವಳ ಆ ಪ್ರೀತಿಯ ಕಂದೀಲು ನಂದಲಿಲ್ಲ ಅವನಲ್ಲೂ ..., ನೆನಪು ನನ್ನಲ್ಲೂ. ಅವರ ಆ ಕನಸಿನ ಸೌಧ ಕುಸಿದಿರದಿದ್ದರೆ..., ಇಂದಿಗೂ ಸುಖ, ನಗು, ಸಂತಸ ಸದಾ.

ಸದಾ ಜೊತೆಯಾಗಿದ್ದವರು, ಜೊತೆಯಾಗೇ ಇದ್ದರು, ನಾವು ದೂರ ಹೋಗುವವರೆಗೂ. ಮತ್ತೆ ಅವನೇ ಮಾತು ಶುರು ಮಾಡಿದ. ಕನಸ ಕನಸಿನ ಕನಸು ಕಾಣುವುದೆ ಬರಿಯ ಕನಸಷ್ಟೇ. ನನಸಾಗದ ಕನಸು ಎಂದಿಗೂ ಕನಸೇ ಸಮ. ಹಾಗಿದ್ದರೂ, ಯಾವತ್ತೂ ನಾವಿಬ್ಬರೂ ಒಂದು ವಿಷಯ ಮಾತ್ರ ಪರಸ್ಪರ ಹಂಚಿಕೊಳ್ಳಲಿಲ್ಲ. ಅದೇ.... ಆ ಪ್ರೀತಿ ಏಕಾಂಗಿಯೇ ಉಳಿಯಿತು. ಹಾಗೇ ನಮ್ಮಿಂದ ದೂರಾಯಿತು. ದೂರ ಮಾಡಿತು..., ನನ್ನಿಂದ ಅವಳನ್ನು, ಅವಳಿಂದ ನನ್ನನ್ನು..., ಅದರಿಂದ ನಮ್ಮನ್ನು.

ನಮ್ಮನ್ನು, ಮರೆತ ಮೈಯನ್ನ ಎಚ್ಚರಿಸಿದ್ದು ಗುಡುಗು. ಯಾವ ಗೊಡವೆಯೂ ಇಲ್ಲದೆ ಸುಮ್ಮನೆ ಸುರಿವ ಮಳೆ, ಅಂದೇ ಅವರನ್ನು ದೂರಮಾಡಿದ ನಾಳೆ, ಇಬ್ಬರ ಮೇಲೂ ನನಗೆ ಸಿಟ್ಟು ಬಂತು, ಹತಾಶ ನಿಟ್ಟುಸಿರೂ ಬಂತು.

ನಿಟ್ಟುಸಿರೊಂದ ಬಿಟ್ಟು ಹೇಳಿದ. " ಮನಸ್ಸು ಮುರಿದರೂ ಸರಿ ಬಿಡು; ಮನಸ್ಸಲ್ಲಿರುವದ್ದು ಮಾತ್ರ ಹೇಳಿಬಿಡು." ಮೌನ ಮುರಿದು ಅವನೇ ಮಾತು ಮುಂದುವರಿಸಿದ. " ಸರಿ. ಹಾಗೇ... ಇವತ್ತು ಇಲ್ಲೇ ಉಳಿದು ಬೆಳಗ್ಗೆ ಹೊರಡು. ನನ್ನ ನಿನ್ನೆಯನ್ನು ಬಿಡು. ಇವತ್ತಿನ ಬಗ್ಗೆ ಮಾತಾಡ್ಲಿಕ್ಕೆ ತುಂಬಾ ಉಂಟು." ತೊಡೆ ಮೇಲೆ ಕುಳಿತಿದ್ದ ಮಕ್ಕಳನ್ನು ಎತ್ತಿಕೊಂಡು " ಅವಳೂ ಬರ‍್ಲಿ. ಗುರ‍್ತ ಆದಹಾಗೆ ಆಯ್ತು. ಮತ್ತೆ....."

ಮತ್ತೆ ಏನೂ ನೆನಪಿಲ್ಲ. ಕಣ್ಮುಚ್ಚಿದ್ದೆ. ಮಳೆಯ ಜೋಗುಳಕ್ಕೆ ಹತ್ತಿತು ಸಿಹಿಯ ನಿದ್ದೆ. ಆ ನಿದ್ದೆಯಿಂದಲೂ ಎದ್ದೆ, ನೆನಪಾದ ಅವನ ಆ ಮಾತಿಗೆ, ಮತ್ತೆ ಆಲೋಚನೆಗೆ ಬಿದ್ದೆ. " ಮನಸ್ಸು ಮುರಿದರೂ ಸರಿ ಬಿಡು; ಮನಸ್ಸಲ್ಲಿರುವದ್ದು ಮಾತ್ರ ಹೇಳಿಬಿಡು... "

ತಣಿದ ಕಾಫಿ ಮತ್ತು ಅವನ ಸಿಹಿ ಶಬ್ದ ಹ್ಯಾಪಿ

‘ಜಾನೇ ತೂ ಯಾ ಜಾನೇ ನಾ’ ಸಿನೆಮಾ ನೋಡುವವರೆಗೂ ಅವನು ಕಥೆ ಹೇಳಿದವನೇ ಅಲ್ಲ. ಅದೇನಾಯ್ತೋ ನನ್ನ ಗೆಳೆಯ ಕಥೆ ಹೇಳುವ ಮನಸ್ಸು ಮಾಡಿದ. ನನಗೂ ಕಾಫಿಗೆ ತಿಂಡಿ ಬೇಕಿತ್ತು, ಕಥೆಯೂ ಶುರುವಾಯ್ತು.

ಶುರುವಾದದ್ದು ಆ ದಿನದಿಂದ..., ಮೊದಲು ಅವಳನ್ನು ಕಂಡ ದಿವಸದಿಂದ.

ದಿನವಿಡೀ ಅಕ್ಷರಗಳ ಜೊತೆಗೆ ಮಾತಾಡುವ, ನಗುವ, ನಿದ್ರಿಸುವ, ಕನಸ ಕಾಣುವ ಕಾಯಕ ಅವನದು. ಹೀಗಿರುವ ಒಂದು ದಿನ ಪತ್ರಿಕೆಯ ಸಂಪಾದಕ ಮಂಡಳಿಗೆ ಹೊಸತಾಗಿ ಸೇರಿದಳು. ಅವಳ ಹೆಸರು ಅಪ್ಸರ. ಹೆಸರಿನಷ್ಟೇ ಅಂದ ಚಂದ ಅವಳ ಕೆಲಸದಲ್ಲೂ ಕಾಣುತ್ತಿತ್ತು. ಗೆಳೆಯನೊಂದಿಗೂ, ಸಂಪಾದಕ ಮಂಡಳಿಯ ಎಲ್ಲರೊಂದಿಗೂ ಅಷ್ಟೇ ಬೇಗ ಬೆರೆತು, ಹೊಂದಿಕೊಂಡದ್ದೂ ಆಯ್ತು. ಹಾಗೆ ಕೆಲಸಗಳೂ ಕೂಡ ಅವಳನ್ನು... ಗೆಳೆಯನಂತೆ, ಉಳಿದವರಂತೆ.

ಉಳಿದವರಂತೆ ಅವರೂ ಹಾಗೇ ಇದ್ದರು. ವರುಷಗಳವರೆಗೂ ಬರೆವ ಕೆಲಸದವರು, ಬರೆಯ ಸಹೋದ್ಯೋಗಿ, ಸಹ-ಮಿತ್ರರು. ಆದರೂ ಅವರಿಬ್ಬರು ಮತ್ತೊಬ್ಬರ ಬಗ್ಗೆ ತಿಳಿದುಕೊಳ್ಳುವ ಮನಸ್ಸು ಮಾಡಲಿಲ್ಲ... ಅಂಥ ಸಂದರ್ಭವೂ ಬರಲಿಲ್ಲ.

ಬರಲಿಲ್ಲ ಎನ್ನಲಾಗದು. ಅದು ಅವನ ಮರೆಯದ ದಿನಗಳಲ್ಲೊಂದು. ಯಾವುದೋ ತ್ವರಿತ ಕೆಲಸಕ್ಕಾಗಿ ಜೊತೆಯಾಗಿ ಹೋಗಬೇಕಾಯ್ತು. ಆಯ್ತು... ಹೋದದ್ದೂ ಆಯ್ತು, ಹೋದ ಕೆಲಸವೂ ಸಹ. ಬರವಣಿಗೆ ಪತ್ರಿಕೆಯ ಪುಟವೂ ಸೇರಿತು. ಶ್ರಮ ಸಾರ್ಥಕವಾಯ್ತು.

ಅಂದಿನಿಂದ ಪ್ರತಿ ಕೆಲಸಕ್ಕೆ ಇದೇ ಜೊತೆ. ಪ್ರತಿ ಯಶವೂ ಜೊತೆ ಜೊತೆ.

ಜೊತೆ ಜೊತೆಗೆ ಪ್ರತಿ ದಿನವೂ ಮಾತು, ಓಡಾಟ, ನಗೆ, ಸಂದೇಶಗಳಲ್ಲಿ ವಾದ, ಪರಸ್ಪರ, ಒಡನಾಟದಲ್ಲಿ ಹೊಸ ಖುಶಿ, ಸಂತೋಷದ ಸವಿ.

ಸವಿನೆನಪುಗಳನ್ನು ನೆನೆಸಿ, ಬರೆವ ಅವನ ಲೇಖನಗಳೂ ಸಿಹಿ. ಬಹುಶಃ ಅದರ ಹಿಂದಿನ ಅರ್ಥ ಮಾತ್ರ ಯಾರಿಗೂ ಆಗಲಿಲ್ಲ. ಅವಳಿಗೂ..., ಇದೆಲ್ಲ ನೋಡುತ್ತಿದ್ದ ಜಗದ ಕಣ್ಣುಗಳಿಗೂ....

ಇವನ ಕಣ್ಣಲ್ಲಿ ಸದಾ ಅವಳೇ ಚಿತ್ರ, ಅಕ್ಷರ, ವಾಕ್ಯ, ಲೇಖನಮಾಲೆ. ದಿನದ ಪ್ರತಿ ಅಂಕಣಗಳಿಗೂ ಅವಳೇ ಸ್ಪೂರ್ತಿ. ಪ್ರತಿದಿನದ ಬರವಣಿಗೆಯಲ್ಲೂ ಒಂದು ಹೊಸ ಖುಷಿ, ಲವಲವಿಕೆ. ಅದೇ ಅವನ ಜೀವನ, ಕ್ಷಣ ಕ್ಷಣ, ಜಗ.

ಜಗದ ಪ್ರತಿ ದಿನದ ಉದಯವೂ ಅವನು ಹ್ಯಾಪಿಯಾಗಿರುವೆ ಎಂದು ದಿನ ಕಳೆವ ಮನಸ್ವಿ, ಪರರಿಗೂ ಅದನ್ನೇ ಬಯಸುವ ತಪಸ್ವಿ. ಆದರೂ ಅವನ ಮನಸಿನ ಒಳಗೆ, ಮೂಲೆಯಲ್ಲೆಲ್ಲೋ ಒಂದು ಕನಸ ಚಡಪಡಿಕೆ, ಹೇಳಲಾರದ ಮಾತ ತಹತಹಿತ, ತಳಮಳ. ಅದನ್ನವಳಲ್ಲಿ ಹೇಳಲೂ ಆಗದು, ಮನದೊಳಗೆ ಅವಳನ್ನು ಇಟ್ಟುಕೊಂಡಿರಲೂ ಆಗದು. ಆದರೂ ಆ ನೋವಲ್ಲೇ ದಿನ ದೂಡುತಿದ್ದ, ನಗೆಯೊಡನೆ... ತಪ್ಪು... ಬರೀ ನಗೆಯ ಹುಸಿದಿರಿಸೊಡನೆ ಎಂದರೆ ಲೇಸೆಷ್ಟೋ.

ಎಷ್ಟೋ ಸಲ ಅವಳಲ್ಲಿ ಮನದ ಮಾತು ಹಂಚಿಕೊಳ್ಳಲು ಪ್ರಯತ್ನಿಸಿದ... ಇಂದಿಗೂ ಆ ಪ್ರಯತ್ನದಲ್ಲಿ ಗೆದ್ದಿಲ್ಲ. ಅವಳ ಮನಸ್ಸು ಹೇಗಿರಬಹುದೋ..., ಮನದಲ್ಲಿ ಯಾರಿರಬಹುದೋ...? ಎಂದೆಲ್ಲಾ ಯೋಚನೆ, ಆಲೋಚನೆಯಲ್ಲೇ ಎಲ್ಲಾ...!

ಏನೆಲ್ಲಾ ಸಾಧನೆಯ ಹಾದಿ ತುಳಿದ ಹುಂಬ... ಇಲ್ಲಿ ಇಂದಿಗೂ ಸೋತವನಂತೆ ನಿಂತಿದ್ದಾನೆ. ಸೋಲ ವಿಷಾದತೆಯು ಎದೆ ತುಂಬಿದ್ದು, ಮನ ಮರುಗುತ್ತಿರುವುದನ್ನು ಕಣ್ಣು ಸಾರಿ ಹೇಳುತ್ತಿವೆ, ಲೇಖನಗಳೂ ಬದಲಾಗಿವೆ, ಆ ಕನಸುಗಳೂ ಕಾಣದಾಗಿವೆ..., ಕಳೆದ ಕಾಲದ ಜೊತೆ.

..... ಜೊತೆ ಜೊತೆಯಲ್ಲಿ ಮತ್ತೊಮ್ಮೆ ಅವರಿಬ್ಬರೂ ನಗುತ್ತಿದ್ದಾರೆ, ಮಾತಾಡುತ್ತಿದ್ದಾರೆ, ಸಂದೇಶದಲ್ಲೇ ವಾದ ಮಾಡುತ್ತಿದ್ದಾರೆ... ಅದೇ ಕಳೆದ ಸಾಲನ್ನು ನೆನಪಿಸಲು ಪ್ರಯತ್ನಿಸುವ ಗೆಳೆಯ, ಅವನ ಗೆಳೆಯರು, ಬರವಣಿಗೆಯ ಸಹ-ಮಿತ್ರರು, ಎಲ್ಲರೂ ಹ್ಯಾಪಿಯಾಗಿದ್ದಾರೆ. ಪರಸ್ಪರ ಮನಸ್ಸನ್ನು ಅರಿಯದೆ, ಜೊತೆಯಿರುವವರ ಕನಸನ್ನು ತಿಳಿಯದೆ..., ಪ್ರಯತ್ನವೂ ಮಾಡದೇ...!

ಕಥೆ ಹೇಳುತ್ತಾ ಆ ಗೆಳೆಯನಿಗೆ ಬಂದಿತ್ತು ಸಣ್ಣ ಸಂತೃಪ್ತಿಯ ನಿದ್ದೆ, ಅದನ್ನು ಕೇಳುತ್ತಾ ನನ್ನ ಕಣ್ಣೂ ಆಯ್ತು ಸ್ವಲ್ಪ ಒದ್ದೆ. ಆ ಮೌನದ ಜೊತೆ ಉಳಿದದ್ದು... ತಣಿದ ಕಾಫಿ ಮತ್ತು ಅವನ ಸಿಹಿ ಶಬ್ದ ಹ್ಯಾಪಿ.