Mar 17, 2013

ಅನಿಕೇತನ ಅಂತರಂಗದ ಕಡೆಗೆ...

     ಹೊಸತೊಂದು ದಿನದ ಕನಸ ಹಿಡಿದು ಸೂರ್ಯ ಬೆಳಕು ಮೂಡಿಸಿದ್ದ. ಮತ್ತೊಂದು ಕನಸ ಕಾಣಲು ಚಂದ್ರ ನಿದ್ದೆಗೆ ಜಾರಿದ್ದ. ಅಂದೊಂದು ಹೊಸತನದ ಕನಸ ಬೆನ್ನ ಹಿಡಿದು ಅವನು ಎದ್ದಿದ್ದ, ಬೆಳಗಿನ ಸೂರ್ಯನೊಂದಿಗೆ, ಮಲಗಿದ ಚಂದ್ರನೊಂದಿಗೆ, ಹೊಸದಿನದ ಹೊಸತು ಉದಯದೊಂದಿಗೆ, ಕ್ಷಣ ಕ್ಷಣದ ನಡುವಿನ ಸ್ಥಬ್ದ ಮೌನದೊಂದಿಗೆ.

     ಮೌನದೊಂದಿಗೆ ಅವರಿಬ್ಬರ ನಡೆ ಸಾಗುತ್ತಿತ್ತು. ಅವನು ಮತ್ತು ಅವನ ಗೆಳೆಯನವನು. ಮುಂದಡಿಯಿಡುವ ಹೆಜ್ಜೆ ಹೆಜ್ಜೆಗಳ ದನಿಮಾತ್ರ ನಿಶಬ್ದ ಮೌನಗಳ ಮುರಿಯುತ್ತಿತ್ತು, ಮತ್ತೆ ಅಲ್ಲಿ ಮೌನವೇರುತ್ತಿತ್ತು, ಶಬ್ದ ನಿಲ್ಲುತ್ತಿತ್ತು. ಮಳೆ ನಿಂತು ನೆನೆದಿದ್ದ ದಾರಿಯಲ್ಲಿ ನಡೆಯುತ್ತಾ ಬೆನ್ನವರೆಗೆ ಕೆಸರ ಎರಚಿದ್ದ ಚಪ್ಪಲಿಯನ್ನು ಅಲ್ಲಲ್ಲಿ ನಿಂತಿದ್ದ ಕೆಸರು ನೀರಲ್ಲಿ ಕಾಲದ್ದಿ ತೊಳೆದು ಮುಂದೆ ಸಾಗುತ್ತಿದ್ದರು. ಮಳೆಗೆ ತೊಯ್ದ ಮರ ಗಿಡಗಳಿಂದ ಮೈಮೇಲೆ ಬಿದ್ದ ನೀರಹನಿಗಳು ಅಲ್ಲಲ್ಲಿ ಚುಕ್ಕೆಯಿಟ್ಟಂತೆ ಕಾಣುತ್ತಿತ್ತು. ಅವರು ನಿಲ್ಲದೇ ನಡೆಯುತ್ತಿದ್ದರು ಅವರದೇ ಗುಂಗಿನಲ್ಲಿ, ಅವರವರ ಅಂದಾಜಿನಲ್ಲಿ, ಮುಂಜಾವ ಮಂಜುಗತ್ತಲಲ್ಲಿ, ಮಲೆನಾಡ ಮಳೆಯ ಮಣ್ಣಿನ ಹಾದಿಯಲ್ಲಿ, ಜೊತೆ ಜೊತೆಯಲಿ.

     ಜೊತೆ ಜೊತೆಯಲಿ ಅವನ ನಾಯಿ ಬೊಳ್ಳು ಸಹ ಅವರ ಜೊತೆ ನಡೆಯುತಿತ್ತು. ಒಮ್ಮೆ ಹಿಂದೆಲ್ಲೋ ಬಾಕಿಯಾಗಿ ನಿಂತಿದ್ದರೆ, ಮತ್ತೊಮ್ಮೆ ಓಡಿ ಅವರಿಗಿಂತ ಮುಂದೆ ಸಾಗಿರುತ್ತಿತ್ತು. ಹಿಂದಿನ ರಾತ್ರಿಯ ಧಾರಾಕಾರ ಮಳೆ ಧರೆಯನ್ನು ತೊಳೆದು ತಣ್ಣಗಾಗಿಸಿದ್ದರೆ, ಅವನೊಳಗಿನ ಅಶ್ರುಧಾರೆ ಮನಸನ್ನು ತೊಳೆದು ಹಗುರಾಗಿಸಿತ್ತು. ಬೊಳ್ಳುನ ಓಟದಂತೆ ಅವನ ಮನದೊಳಗೂ ಕಳೆದ ಸಮಯದ ಹುಚ್ಚು ನೆನಪು ಓಡಹತ್ತಿತ್ತು, ಅವರಿಂದಲೂ ಮುಂದೆ, ಮುಂದಿದ್ದ ಬೊಳ್ಳುಗಿಂತಲೂ ಮುಂದೆ.

     ಮುಂದೆ ಅವಳು ನಡೆಯುತ್ತಿದ್ದಳು, ಅವನು ಹಿಂದೆ. ಅಂದಿನವರೆಗವರು ಬರಿಯ ಸ್ನೇಹಿತರು. ಆದರಂದು ವರುಷಗಳ ಸ್ನೇಹಸಂಬಂಧವನ್ನು ಮುರಿದು ಅವರು ಸಂಗಾತಿಗಳಾಗಬೇಕೆಂಬುದು ಅವಳ ಹಿರಿಯರ ಹಂಬಲ, ಇಂಗಿತ,  ನಿರ್ಧಾರವೂ ಸಹ. ಕ್ಷಣ, ಘಳಿಗೆಯೂ ಅಂತಹುದೊಂದು ಸಂದರ್ಭದ, ಸಂಬಂಧದ ಬಗೆಗೂ ಯೋಚಿಸದವನಲ್ಲಿ ತುಮುಲ, ತಳಮಳ, ಆಶ್ಚರ್ಯ, ಅಯೋಮಯ. ನಿಮಿಷಗಳ ಹಿಂದೆ ಅವರೇನಾಗಿದ್ದರೋ ಆಗದಿಂದ ಅವರು ಅವರಾಗಿ ಉಳಿದಿರಲಿಲ್ಲ. ಅವನೊಳಗೆ ಅರಿಯಲಾರದಂತಹುದೊಂದು ಪ್ರಣಯಸಂವೇದಿ ಭಾವನೆ ಹುಟ್ಟುಹಾಕಿದ್ದ ಅವನ ಪ್ರಾಣ ಸ್ನೇಹಿತ, ಹಾಗೆಯೇ ಅವಳೊಳಗೂ, ಅವರಿಬ್ಬರೊಳಗೂ.

     ಅವರಿಬ್ಬರೊಳಗೂ ಹೇಳಿಕೊಳ್ಳಲಾಗದ ಉದ್ವೇಗ, ಕಾತರ, ತೋರ್ಪಡಿಸಲಾಗದ ತಹತಹಿತ, ಹಿತವಾದ ಆನಂದ ಸನ್ನಿಹಿತ. ಅವಳಲ್ಲೂ ಅವನೆದೆಯ ಭಾವನೆಗಳೇ ಅವನೆಡೆಗಿವೆಯೆಂದು ಅವನ ಗೆಳೆಯನಿಂದ ತಿಳಿದ ಮೇಲಂತೂ ಅವನು ಅವನನ್ನೇ ಮರೆತಿದ್ದ. ಹಳೆಯ ನೆನಪಿನ ಹೊಸತು ಸಂಬಂಧ, ಕಳೆದ ಕಾಲದ ನವೀನ ಆನಂದ ಎಲ್ಲವೂ ಬದಲಾಗಿ ಬಣ್ಣತುಂಬಿದ ಚಿತ್ರವಾಯಿತು. ಚಿತ್ರದೊಳಗೆ ರೂಪಾಂತರವಾಗಿ ಮನ ಹಾರಲಾರಂಭಿಸಿತು, ಅವನಾಗಿ, ಅವಳಾಗಿ, ಅವನ ಅವಳಾಗಿ, ಅವಳ ಅವನಾಗಿ. ಕಳೆದು ಹೋಗಿದ್ದ ಅವನೊಳಗೇ ಅವನು ಆನಂದತುದಲಿತನಾಗಿ.

     ಆನಂದತುದಲಿತನಾಗಿ ಅವಳೊಂದಿಗೆ ಮನಸ್ಸು ಮಾಡಿ ತನ್ನ ಮನದಿಂಗಿತ ಬರಿದು ಮಾಡಿದ್ದ. ಅಂದಿನವರೆಗೂ ಅಂತಹಾ ಭಾವನೆಗಳ ವಶವಾಗಿರದ ಅವಳು ಭಾವಪರವಷವಾಗಿ ಅವನೊಂದಿಗೆ ಮಾತು ಮುಂದುವರೆಸಿದ್ದಳು. ನಿನ್ನೆಯದಲ್ಲವೆಂದೆನಿಸುವ ಇಂದು, ನಿನ್ನೆಯವರಲ್ಲವೆಂದೆನಿಸುವ ಅವರ ಸಹಚರ್ಯ, ಸಾಂಗತ್ಯ, ನಿನ್ನೆಯದೆಲ್ಲ, ನಿನ್ನೆಯವರೆಗಿನದ್ದೆಲ್ಲ, ನಿನ್ನೆಗೇ ಅದು ಅಂತ್ಯ ಎಂದೆನಿಸಲಾರಂಭಿಸಿತ್ತು ಅವಳಲ್ಲಿ. ಬರಿಯ ವರುಷಗಳ ಪರಿಚಯ, ಒಡನಾಟಗಳೆಲ್ಲ ಜನುಮಗಳ ಗಾಢ ಬಂಧನ, ನೆನಪ ನಿತ್ಯ ಸಾಗರವೆಂಬಂತೆ ಅವನಲ್ಲಿ ಮೂರ್ತವಾಗಲಾರಂಭಿಸಿತ್ತು. ಧಮನಿ ಧಮನಿಯಲ್ಲೂ ಅಮೂರ್ತ ಅಮೃತ ಸಂಚಾರವಾದಂತೆ, ಅವಳೆಡೆಗಿನ ಯೋಚನೆಯೇ ರೋಮಾಂಚನ ತಂದಂತೆ ಭಾಸವಾಯಿತು. ಹಗಲು ರಾತ್ರಿಗಳೆರಡೂ ಒಂದಾದಂತೆ, ಕ್ಷಣ ಕಾಲ ನಿಂತಂತೆ, ಅವಳಿಲ್ಲದೆ ಬಾಳೇ ಇಲ್ಲವೆಂಬಂತೆ ಅವನಿಗೆ ತೋರಲಾರಂಭಿಸಿತ್ತು. ಆಯನಗಳಾಚೆ ಸಮಯ ಸರಿದಂತೆ, ಆ ನಯನಗಳಾಚೆ ಕನಸು ಕಂಡಂತಹಾ ಜೈತ್ರಭಾವ ಅವನ ತುಂಬಿತ್ತು. ಮತ್ತೆ ಮುನ್ನೂರು ಮಾತುಗಳಲಿ ಮನಸೆರಡೂ ಮುಳುಗಿತ್ತು ಜೊತೆಗೆ ರವಿಯ ಪ್ರಯಾಣ ಪಡುವಣದೆಡೆಗೆ ಸಾಗಿತ್ತು.

     ಸಾಗಿತ್ತು ಅವನ ನಡಿಗೆ ಅದೇ ಹಾದಿಯಲ್ಲಿ, ಅವನ ಗೆಳೆಯನ ಜೊತೆ ಮತ್ತವನ ಬೊಳ್ಳುನ ಜೊತೆ. ಸೂರ್ಯೋದಯ ನೋಡಲು ಹೊರಟವರು ದಣಿವಾರಿಸಲು ದಾರಿ ಬದಿಯಲ್ಲೇ ಭಾಗಶಃ ಒಣಗಿದ್ದ ಕಲ್ಲುಬಂಡೆ ಏರಿ, ಕಾಲು ಇಳಿಬಿಟ್ಟು ಕುಳಿತರು. ಏನೋ ನೆನಪಾಗಿ ಹಿಂತಿರುಗಿ ಬಂದಂತೆ ಬೊಳ್ಳು ಓಡಿ ಬಂದವನೇ ಕಲ್ಲಿಗೊಂದು ಸುತ್ತು ಬಂದು, ಕಲ್ಲು ಏರಿ ಅವರೊಂದಿಗೆ ಕುಳಿತುಬಿಟ್ಟ. ನಿಮಿಶಗಳ ನಂತರ ಮತ್ತೆ ಅವರ ನಡಿಗೆ ಮುಂದುವರೆಯಿತು. ಉದಯಿಸುವ ಸೂರ್ಯನನ್ನು ಕಾಣಲು, ಬೊಳ್ಳುನ ತಿರುಗಾಟದ ಹುಚ್ಚು ತಣಿಸಲು, ಗೆಳೆಯನೊಡನೆ ಮನಸಾರೆ ಸಮಯ ಕಳೆಯಲು.

     ಕಳೆಯಲು, ಕೂಡಲು, ಗುಣಿಸಿ, ಭಾಗಿಸಲೂ ಸಿಗದ, ಲೆಕ್ಕವಿಲ್ಲದ, ಲೆಕ್ಕಕ್ಕೆ ಸಿಗದ, ಪ್ರೀತಿಯ ಲೆಕ್ಕಾಚಾರವನ್ನು ಲೆಕ್ಕ ಸಿಗದಷ್ಟು ಸಾರಿ ಮಾಡಿದರೂ ಲೆಕ್ಕ ತಪ್ಪಿ ಮತ್ತೆ ಲೆಕ್ಕವಿಡಲಾಗದೆ ಸಾಕಾಗಿ ಸೋತು ಅವನು ಸುಮ್ಮನಾದ. ತನ್ನ ಮನದಿಂಗಿತವನ್ನು ಮನೆಯವರಲ್ಲಿ ಹೇಳಿ ನಂತರ ಮುಂದಿನ ಹೆಜ್ಜೆಯ ಯೋಚನೆ ಅವನದಾಗಿತ್ತು. ಹಾಗೆಯೇ ತನ್ನ ಆಸೆ, ಆಶೋತ್ತರಗಳನ್ನೆಲ್ಲ ಅವರೆದುರು ಹೇಳಿಕೊಂಡು ಅವರ ಅನುಮತಿಯ ಅಪೇಕ್ಷೆಯಲ್ಲೇ ಕಾತರದಿಂದ ನಿಂತವನು, ನಾಳಿನ ನೂರು ಕನಸುಗಳ ಕುದುರೆಯೇರಿ ಆಕಾಶಕ್ಕೆ ಜಿಗಿದಿದ್ದ. ಅಷ್ಟರೊಳಗೆ ಅಮ್ಮನ ಕಣ್ಣೀರ ಹನಿ ಒಂದೊಂದಾಗಿ ನೆಲ ಸೇರಲಾರಂಭಿಸಿತ್ತು. ಉತ್ತರ ಕಾಣದ ಪ್ರಶ್ನೆಯೊಂದಿಗೆ ಗುದ್ದಾಡುವ ಪ್ರಯತ್ನದಲ್ಲೂ ಸೋತು, ಕಾರಣವೇನೆಂದು ನೇರವಾಗಿ ಕೇಳಿದ್ದನು. ಮನದ ಕ್ಷೋಭೆಯನ್ನು ಮಗನಲ್ಲಿ ಹೇಳಲೂ ಆಗದೆ, ಅನ್ಯ ಕುಲದವಳನ್ನು ಒಪ್ಪಿಕೊಳ್ಳಲೂ ಆಗದೆ, ವಾಸ್ತವದ ಪರಿಹಾಸಕ್ಕೆ ಸಿಕ್ಕು, ಆಚಾರ ವಿಚಾರದ ಉರುಳಲ್ಲಿ ಬಿದ್ದು ಹೊರಬರಲೂ ಆಗದೆ, ಮಗನ ಕನಸಿನ ಚಿಗುರನ್ನು ಚಿವುಟಲೂ ಮನಸಾಗದೆ, ಮನದೊಳಗಿನ ಆರ್ದತೆ ಅಶ್ರುವಾಗಿ ಹೊರಬಂದಿತ್ತು. ಸದ್ದಿಲ್ಲದೆ ಒಳನಡೆದಿದ್ದಳು, ಉತ್ತರವ ಬಯಸುತ್ತ ನಿಂತ ಅವನ ಹತ್ತಿರವೇ ನಿಂತೂ ನಿಲಲಾಗದೆ ಕುಸಿದು ಕುಳಿತಳು, ಕಾತರದ ಪ್ರಶ್ನೆಗೆ ಅವನ ಅಮ್ಮ ಮಾರ್ಮಿಕ ಉತ್ತರವಿತ್ತಿದ್ದಳು. ಮರುಕ್ಷಣದ ಉದ್ವಿಗ್ನ ಉದ್ವೇಗಗಳನ್ನೆಲ್ಲ ಬಲವಂತವಾಗಿ ಉಪಶಮನ ಮಾಡಿ, ಮರುಕ ಮನವನ್ನು ಅಳಿಸಿ ಹಗುರಾಗಿಸಿದ್ದ, ಉತ್ತರವ ಮತ್ತೆ ಪ್ರಶ್ನೆ ಮಾಡಿದ್ದ. ಮನದ ಬೇಗುದಿಗಳಿಗೆ ಬೇಸರವ ಉಣಬಡಿಸಿ, ತನ್ನೊಳಗೆ ಅವಳಿಗೊಂದು ಮಹಲು ಕಟ್ಟಿದ್ದ, ಜೀವದುಸಿರಿನ ಹಣತೆ ಉರಿಸಿದ್ದ. ತನ್ನೊಳಗೆ ತನ್ನತನ ಅವನು ಹುಡುಕುತ್ತಿದ್ದ.

     ಹುಡುಕುತ್ತಿದ್ದ ಸೂರ್ಯ ಹಿತವಾಗಿ ಕಾಣಲಾರಂಭಿಸಿದ್ದ, ಅಲ್ಲಿನ ಪೊದರು ಗಿಡಮರಗಳ ಹಿಂದೆ ಅಡಗಿದಂತೆ ಕಂಡು, ದೂರದ ಗುಡ್ಡೆಯ ಹಿಂದಿನಿಂದ ಮೆಲ್ಲಗೆ ಮೂಡಲಾರಂಭಿಸಿದ್ದ. ಮುಂಜಾನೆಯ ತಂಪು ಕಿರಣಗಳನ್ನೆಲ್ಲ ದಿಕ್ಕು ದಿಕ್ಕಿಗೆ ಎಸೆದು ಬೆಳಗನ್ನು ಎಲ್ಲರಿಗೂ ಮುಟ್ಟಿಸಲು ನಗುತ ಬರುತಿದ್ದ. ಅವರು ಇವರೆನ್ನದೆ, ಭೂಮಿ ಆಕಾಶವೆನ್ನದೆ, ಊರು ಕಾಡೆನ್ನದೆ, ಜಾತಿ ವಿಜಾತಿಯೆನ್ನದೆ ಎಲ್ಲರನೂ ಬಯಸುವವ, ಎಲ್ಲರೂ ಬಯಸುವವ ಪಡುವಣದಿ ಪುರುಸೊತ್ತಿಲ್ಲದೆ ಪ್ರಕಾಶಿಸುತ್ತಿದ್ದ.  ಜಾತಿ ಸ್ವಜಾತಿ, ಕುಲ ಗೋತ್ರಗಳ ಗುಂಗಿನಲ್ಲಿ, ಮಗನ ಮನಸ್ಸನ್ನು, ಪ್ರೀತಿಯ ಹಂಬಲಗಳನ್ನೆಲ್ಲ ಗೌಣವಾಗಿಸಿದ್ದ ಅಮ್ಮನ ಮುಗ್ಧ ಮನಸ್ಸು ಸೂರ್ಯನ ಜಾಜ್ವಲ್ಯ, ಅಗಾಧ ಪ್ರಕಾಶದೆದುರು ಕ್ಷಣ ಕ್ಷೀಣವಾದಂತೆ ಅವನಿಗನಿಸಿತು. ವರ್ಣವಿಹೀನ ವರ್ಣ ವರ್ಣನಾನೀತಿ ವೃಣದಂತೆ ಅವನಲ್ಲಿ ಮೊಳೆಯಲಾರಂಭಿಸಿತ್ತು. ಮನಸಾರೆ ಮನದ ಮಾತಿನಂತೆ ಸತ್ವವಿಹೀನ ಸಾಮಾಜಿಕ ಕಟ್ಟಳೆಗಳನ್ನು ಚೂರು ಚೂರು ಮಾಡಬೇಕೆಂದು ಕಂಡರೂ ಅಮ್ಮನ ನಿತಾಂತ ಪ್ರೀತಿಯ ಮುಂದೆ ಸಮಾಜವೂ ಸಾಮಾನ್ಯವಾಗಿ ಕಂಡಿತ್ತು. ಬದುಕು ನೀಡಿದ ತಾಯಿ, ಮಮತೆ ಬಡಿಸಿದ ಮಾತೆ, ಮನದಲ್ಲಿ ನಿಲುವ ನಲ್ಮೆಯಾಗಿದ್ದವಳೇ ಮೊದಲಾಗಿ ಕಂಡಳು. ಅನಂತ ಪ್ರಶ್ನೆಗಳ ವಿಸ್ತಾರ ವಿಶ್ವದಲಿ ವಿಕ್ಷಿಪ್ತ ವಿಚಾರಧಾರೆಗಳ ಮಥನ ಅವನ ಚಿತ್ತ ಕೆಡಿಸಿತ್ತು. ಒಳಮನಸ ಒದ್ದಾಟ ತಾಕಲಾಟದ ತಾಳ ತನ್ನಷ್ಟಕ್ಕೇ ತಟಸ್ಥವಾಯಿತು. ನಿಮಿಶಗಳ ನೀನಾದ, ಅಂತರಾಳದ ನಿರ್ಲಿಪ್ತ  ಸಂವೇದ ವೇಗ ಕಳೆದುಕೊಂಡು ಸ್ಥಬ್ದವಾಯಿತು. ನೆನಪಾಗಿ ಅವನೊಳಗೆ ಮಡುಗಟ್ಟಿತು, ಅಲ್ಲಿಯೇ ಕೊನೆಯಾಯಿತು.

     ಕೊನೆಯಾಯಿತು, ಕೊನೆಕಂಡಿತು ಅವನ ಆಂತರ್ಯದ ಅನುರಣನ. ಅರುಣೋದಯದ ಅನುಭಾವ ಅನನ್ಯವಾಗಿ ಅವನೊಳಗೆ ಹರಿಯಲಾರಂಭಿಸಿತ್ತು. ಒಳಮನದ ಇರುಳ ಬೆಳಕಾಗಿಸಿತ್ತು. ಉತ್ತರವಿಲ್ಲವೆಂದೆನಿಸಿದ್ದ ಪ್ರಶ್ನೆಗೆ ಉತ್ತರ ದೊರಕಿತ್ತು, ಅತ್ತ ಮನಸು ನಿರಾಳ ನಗು ನಕ್ಕಿತ್ತು. ಮುಂಜಾವಿನ ಮೃದುಲ ತಂಗಾಳಿ ತನುಮನವ ಮರಳಿ ಹಗುರಾಗಿಸಿತ್ತು. ಗೆಳೆಯನೆಡೆಗಿನ ಅವನ ಗೆಳೆತನದ ಅನುಬಂಧ ಅನುಕ್ಷಣವೂ ಅಬೇಧ್ಯ, ಅತೀತವಾಗುತ್ತಿತ್ತು. ದೂರದಲಿ ಓಡುತ್ತ ಬೊಳ್ಳು ಬೊಗಳುತ್ತಿದ್ದ, ಗೆಳೆಯನೂ ಬೊಳ್ಳುನ ಬೆನ್ನುಹತ್ತಿದ್ದ. ಪ್ರಕೃತಿಯೊಂದಿಗೆ ಪರವಶವಾಗಿ ಅವನು ಪರಕಾಯ ಪ್ರವೇಶಿಸಿದ ಆನಂದ ಕಂಡ. ಹೊಸತು ಹೆಜ್ಜೆಯ ನಡೆಯೊಂದಿಗೆ ಅವನು ನಡೆಯಲಾರಂಭಿಸಿದ್ದ ಮರಳಿ ಮನೆಯ ಕಡೆಗೆ, ಅನಿಕೇತನ ಅಂತರಂಗದ ಕಡೆಗೆ, ಮೆಲ್ಲನೆ . . . ಅವನ ಗೆಳೆಯನ ಕಡೆಗೆ, ಅವನ ಬೊಳ್ಳುನ ಬಳಿಗೆ.

Jan 1, 2013

ಅವನು; ಕಥೆಯಾಚಿನ ಕಿರು ಪಾತ್ರಕೆ ಜೀವವಾದವನು

ರಾತ್ರಿ ಹನ್ನೆರಡೂ ಹಗಲು ಅವನಿಗೆ. ಗಡಿಯಾರದ ಮುಳ್ಳಿನ ನಡೆ ಮೀರಿಸುವಂತೆ ಅವನ ಯೋಚನೆಗಳು ಓಡುತ್ತಿತ್ತು. ಚಳಿ, ಕಚಗುಳಿಯಿಡುವ ಹುಚ್ಚು ತಂಗಾಳಿ, ದೂರದಲ್ಲೆಲ್ಲೋ ಹೊಳೆದು ಕಾಣದಾಗಿ ಹೋಗುವ ಮಿಂಚ ದಾಳಿ. ನಿರತ ನಿನಾದ ತುಂಬುವ ಹೊರಗೆ ನೀರ ಹನಿಗಳ ತನನ, ಕನಸ ಕಾಣದ ನಯನ ಬಯಕೆಯೊಂದಿಗೆ ಮಿಲನ, ಅವನೊಳಗೆ ಮರೆಯಲಾರದ ನೆನಪ ಮರಣ, ಮರು ಜನನ.

ಮರು ಜನನ ಇರಬಹುದೇನೋ ಎಂದೆನಿಸುವ ಮಧುರ ಭಾವನೆ ಅಂದವಳು ಎದುರು ಬಂದಂತಾಗಿ ದೂರ ನಿಂತಾಗ. ನೂರು ಜನುಮದ ನೆನಪು ಹಸಿರಾಗಿ ಜೊತೆಯಾದಂತಹಾ ಅನುಭವ, ಸುತ್ತಲಿನ ಪರಿವೆ ಮರೆತು ಅವರಿಬ್ಬರೇ ಜೊತೆನಿಂತ ಅನುಭಾವ. ನಂಬಲಾಗದ ನೂರು ಮೌನ ಮಾತುಗಳಲ್ಲೂ ನಿಜದ ನಂಬುಗೆ ನಿತ್ಯ ನಿಜವಾಗುತಿತ್ತು. ಹೆಸರಿಡದ ಹೊಸತೊಂದು ಬಂಧನದ ಬೇಗುದಿಯು ಅವನೊಳಗೆ ಅವಳನ್ನು ಬರಸೆಳೆಯುತಿತ್ತು, ಬಾಂಧವ್ಯ ಬಿಗಿಯಾಗುತಿತ್ತು. ಮರೆತ ಮಾತುಗಳೆಲ್ಲ ನೆನಪಾಗಿ ಮರೆತಾಯ್ತು, ಕಣ್ಮಿಂಚ ಮಿಂಚೊಂದು ಕಂಡು ಮರೆಯಾಯ್ತು, ಕಣ್ಣ ಬೆಳಕಾಯ್ತು, ಅವಳ ಕಿರುನಗುವೊಂದೇ ಅವನ ಬಲವಾಯ್ತು.

ಬಲವಾಯ್ತು ಅವನ ನಂಬುಗೆ, ನಿಜವಾಯ್ತು ಅವಳು ಅವಳೇ ಎಂದು. ಕಣ್ಣರಿಯಲಾರದ ಕ್ಷಣದ ಛಾಯೆಯ ಕರುಳರಿಯಿತು, ಅಂತಃಕರಣ ಅರಿತು ಮತಿ ಮರೆಯಿತು. ಅಬ್ಬರದ ಅಲೆಯುಕ್ಕಿ ತೀರದಲಿ ಕಟ್ಟಿದ್ದ ಉಸುಕಿನ ಮಾಳಿಗೆಮನೆ ಮರಳಿ ಮರಳಾದಂತೆ, ಕಾಣದ ನೂರು ಕೈಗಳು ನೂರೆಡೆಗೆ ಕಾಲೆಳೆಯುವಂತೆ, ನಿಂತ ನೆಲ ಸೆರೆ ಬಿಟ್ಟು ಇಬ್ಭಾಗವಾದಂತೆ ಅನಿಸಲಾರಂಭಿಸಿತ್ತು. ನಿಲಲಾಗದೆ, ವೇದನೆಯ ಭಾರ ತಡೆಯಲಾರದೆ ಕಾಲ್ಗಳು ಕೈಕೊಡಲಾರಂಭಿಸಿತ್ತು. ಇಂತಹಾ ಚಡಪಡಿಕೆಗಳೆಲ್ಲವನ್ನು ಹತ್ತಿಕ್ಕುವ ಹುಚ್ಚು ಪ್ರಯತ್ನ ಅವನಲ್ಲಿ ಬಲವಾಗಲಾರಂಭಿಸಿತ್ತು. ಅವಳ ದೃಷ್ಟಿ ಮತ್ತೆ ಅವನಲಿ ನೆಟ್ಟು, ಅವಳು ಗುರುತು ಹಿಡಿಯುವುದರೊಳಗೆ ಅವನು ಬದಿಗೆ ಸರಿಯಬೇಕೆಂದು ಮಾಡಿದ ಪ್ರಯತ್ನವೂ ನಿಷ್ಫಲವಾಗಿತ್ತು. ಅವಳಲ್ಲೊಮ್ಮೆ ಅಂತಹುದೇ ಅಮಿತ ಸಂಚಲನ ಶೃಂಖಲೆಯಾಗಿ ಬಿಗಿಯಾಗಿ ಬಂಧಿಸಿ ಅವರಿಬ್ಬರ ಸ್ವಂತ ಸ್ವತಂತ್ರ ದಿನವನ್ನು ಮುಂದೆ ತಂದಿಟ್ಟಿತು. ನೆನಪಿನ ಮಂಜು ಸುತ್ತ ತುಂಬಲಾರಂಭಿಸಿತು. ಅವನನ್ನು ಕಂಡ ಕ್ಷಣ, ಅವಳೊಳಗೆ ಕ್ಷಣ ಕ್ಷಣ.

ಕ್ಷಣ ಕ್ಷಣವೂ ಅವನನ್ನು ಕಾಯುವುದು ಅವಳಿಗೆ ಸಹಿಸಲಾರದ ಭಾರವಗುತಿತ್ತು. ಅವನನ್ನು ನೂರು ಸಲ ಕಾಯಿಸಿದ್ದ, ಕಾಯಿಸಿ ಸತಾಯಿಸಿದ್ದವಳಿಗೆ ಕಾಯುವ ಸಹನೆ, ಕಾತರಗಳೆಲ್ಲ ಒಂದಾಗಿ ಅವನೆಡೆಗಿನ ತಹ ತಹಿತ ಹೆಚ್ಚು ಮಾಡಿದ್ದವು. ನಗು ಮೊಗದಿ ಎದುರು ಬರುತಿದ್ದವನ ನಿಶ್ಚಲ ನಯನಗಳನ್ನು ಕಾಣುತ್ತಿದ್ದಂತೆಯೇ ಓಡಿ ಅವನನ್ನು ಬರಸೆಳೆದು ಬಾಹುಗಳಲ್ಲಿ ಬಂಧಿಸಿ, ಕಾಯುವ ಕಷ್ಟವೆಲ್ಲವನ್ನೂ ಮರೆಯುವಷ್ಟು ಅಪ್ಪಿಕೊಳ್ಳಬೇಕೆಂದೆನಿಸಿತ್ತು. ಬಹಳ ಕಷ್ಟದಿಂದ ಮನದ ಆಸೆಯನ್ನು ಹತ್ತಿಕ್ಕಿ ಅವನ ಕೈ ಹಿಡಿದು ಅವರ ಕಾಯುತ್ತಿದ್ದ ಕಲ್ಲು ಬೆಂಚಿನ ಕಡೆ ಜೊತೆ ನಡೆದಿದ್ದಳು ಅವನೊಂದಿಗೆ. ಜೀವನದ ನಾನೂರು ಯೋಚನೆಗಳನ್ನೂ ಅವನೊಂದಿಗೆ ಹಂಚಿ, ಮನದೊಳಗಿನ ಭಾವನೆಗಳನ್ನೆಲ್ಲ ಬರಿದು ಮಾಡಿದ್ದಳು. ಬಯಸಲಾರದ ಬರಿಯ ಭಾವನೆಯ ಬಯಕೆಯಲಿ ಬೆಂದು ಬಾಡಿದ ಬದುಕ ಬಿದಿಗೆ ಬಾನಿನ ಬಂಧು ಬದಲಾಯಿಸಿದ್ದ. ಕಾರಣವೇ ಕಾಣಿಸದೆ ಕಾಣಲಾರದ ಕನಸ ಕಣ ಕಣದಿ ಕನವರಿಸಿ ಕಣ್ಣ ತೆರೆಸಿದ್ದ. ಚಂದಿರನ ಅಂಗಳದಿ ಹುಣ್ಣಿಮೆಯ ತಂಪೆರೆದು ಕೈಹಿಡಿದು ಹೊಸದಾರಿ ನಡೆಸುವವಳು, ಮನದ ಕಣ್ಗಳಿಗೊಂದು ಹೊಸ ದೃಷ್ಟಿ ಹೊಂದಿಸುತ ಜೀವನವ ಜೊತೆಯಾಗಿ ಜಯಿಸುವವಳು ಎಂದು ಅವನಿಗೆ ಮನದಟ್ಟಾಯ್ತು ಅವಳ ಭಾಷೆಯಿಂದ, ಮನ ಮನದ ಬೆಸುಗೆಯಿಂದ, ಪ್ರೇಮ ಬಾಂಧವ್ಯದಿಂದ, ಅಂದವಳ ಮಾತಿನಿಂದ.

ಮಾತಿನಿಂದ ಹೇಳಲಾಗದ ಅನಂತ ಆನಂದ ಅವನೊಳಂದು ಮನೆಮಾಡಿತ್ತು. ಖುಷಿ ತುಂಬಿ ಎದೆಯೊಳಗೆ ಏನೋ ಹೇಳಲಾರದ ಸಿಹಿ ಅನುಭವ ತುಂಬಿತ್ತು. ಕುರುಡು ಬಾಳೊಳಗೊಂದು ಕಂದೀಲು ಹಿಡಿದು ಅವನ ಹೃದಯದ ಹೊಸ್ತಿಲಲ್ಲಿ ನಗುತ ನಿಂತಿದ್ದಳು. ಅವನ ನಿಶ್ಚಲ ನಂಬುಗೆಯನ್ನು ನಿಜಮಾಡುವ ದಿನದ ನೆನಪನ್ನು ಕಳೆಯಲಾರದೆ ಸದಾ ಕಾಯ್ದಿಡುವ ಆತುರದಿಂದ ಅವಳ ಬರ ಕಾಯುತಿದ್ದ, ಹೆಜ್ಜೆ ಗೆಜ್ಜೆಯ ನವಿರ ದನಿ ಕಾಯುತಿದ್ದ, ತನ್ನೊಳಗೆ ತನ್ನನ್ನೇ ಮರೆಯುತಿದ್ದ. ಪ್ರತಿದಿನ ಖುಷಿಯಿಂದ ಕಾಯಿಸುತ್ತಿದ್ದವಳವಳು, ದಿನ ಖುಷಿಯಿಂದ ಅವಳ ಕಾಯುತಿದ್ದ, ಕಾಯುತ್ತಲೇ ಇದ್ದ, ಅವಳು ಬರುತಾಳೆಂದು, ಕನಸ ನಿಜ ಮಾಡುವಳೆಂದು. ಮುಸ್ಸಂಜೆ ಅಡಿಯಿಟ್ಟು ಸೂರ್ಯ ಮರೆಯಾದರೂ ಅವನವಳ ಕಾಯುತ್ತಲಿದ್ದ. ದಿನ ಕಂತುವ ಹೊತ್ತು, ಕೇಳಿಸಿತ್ತವಳ ಹೆಜ್ಜೆಯ ಗತ್ತು. ಕಾದು ದೊರಕಿದ ಫಲದ ಸಿಹಿ, ಗಮ್ಮತ್ತು ಅವನಲಂದು ತುಂಬಿ ತುಳುಕುತಿತ್ತು. ಎಂದಿನಂತೆ ಬಳಿ ಬಂದು ಅವನ ಕೈಯೊಳಗೆ ಕೈಯಿಟ್ಟು ಕುಳಿತುಕೊಳ್ಳುವವಳು ಅಂದು ಮಾರು ದೂರದಲ್ಲೇ ನಿಂತಿದ್ದಳು. ಅವನು ಮನಸಾರೆ ಕೇಳಬೇಕೆಂದು ಕಾತುರದಿಂದ ಕಾಯುತ್ತಿದ್ದ ಅವಳ ಮಾತ ಕೇಳಲು ತಲೆಯೆತ್ತಿ ಅವಳೆಡೆಗೆ ಮುಖವಿಟ್ಟು, ಒಂದು ಪ್ರಶ್ನಾರ್ಥಕ ನಗೆ ಬೀರಿದ. ನಿಮಿಶಗಳ ನಿಶ್ಯಬ್ಧವನ್ನು ಸೀಳಿ ಅವಳು ಮಾತಾಡಿದ್ದಳು. ಅವನ ಕರ್ಣ ಪಟಲಗಳನ್ನು ಮೀರಿ, ಹೃದಯದ ಬಡಿತವನ್ನೂ ಕಂಪಿಸಿ ದೂರವಾಗಿತ್ತು, ದಿಗ್ಮೂಢನನ್ನಾಗಿಸಿತು ಅವಳಾಡಿದ ಮಾತು. ಅವಳ ಮಾತುಗಳೊಂದೊಂದೂ ಅವನ ಇಷ್ಟವನ್ನೆಲ್ಲ ಸ್ಪಂದಿಸುವುದೆಂದು ಕಾಯುತ್ತಿದ್ದವನ ಕಿವಿಗೆ ಕುದಿ ಗರಳ ಹೊಯ್ದಂತಾಯ್ತು. ಭ್ರಮೆಯ ಸಂಭ್ರಮದೊಳಗೆ ಜೀವಿತವ ಮರೆತವಗೆ ವಾಸ್ತವದ ಬರಸಿಡಿಲು ಸಾವ ತಂದಿತ್ತು. ಕ್ಷಣ ಹಿಂದೆ ಪಸರಿಸಿದ್ದ ಸಂತಸದ ಸಂಗೀತ ಸಂತಾಪ ಶೋಕದಲಿ ಮಾರ್ದನಿಸುತಿತ್ತು. ಜಗದೊಳಗೆ ಮನೆಮಾಡಿ ಜಗವ ಕಬಳಿಸಿ ಮೆಲ್ಲ ಅವನ ಮನಸನೂ ತುಂಬಿ ಇರುಳು ಸಾಗಿತ್ತು, ಬೆಳಕ ಕೊಂದಿತ್ತು, ಕಣ್ಬೆಳಕು ಸೋತಿತ್ತು.

ಸೋತಿತ್ತು ಅವಳ ಯೋಚನಾಲಹರಿ, ಹರಿದು ಚೂರಾಯ್ತು ಅವಳ ಸ್ವಂತಿಕೆಯ ಪರಿಧಿ. ಮನದಿಂದ ಅವನನ್ನು ದೂರವಿಡಲು ಪಟ್ಟ ಪಾಡೆಲ್ಲ ವೃಥಾ ವ್ಯರ್ಥವಾಗುತ್ತಿತ್ತೇ ಹೊರತು ನೆನಪು ಸಾಯುತ್ತಿರಲಿಲ್ಲ. ಅವನೊಂದಿಗಿನ ನಿತ್ಯ ಒಡನಾಟ, ಸಂತೋಷ ಸಾಂಗತ್ಯ, ಜೊತೆ ಕಂಡ ಕನಸು ಮರೆಯಲಾಗದ ಸತ್ಯ, ನಿಷ್ಕಳಂಕ ಚರಿತ್ರ, ಕಣ್ಣಿದ್ದೂ ಕಣ್ಬೆಳಕಿಲ್ಲದ ಅಂತರಂಗ ಸುನೇತ್ರ..... ಮತ್ತೆಂದೂ ಅವನನ್ನು ಕಾಣುವೆನೆಂದು ಕನಸೂ ಕಂಡಿರದ, ಅವಳ ಸ್ಮೃತಿಪಟಲದಿಂದ ದೂರಾಗಿ ಮಾಸಿ ಕಾಣದಾದ ನೆನಪಿನವ ಮತ್ತೆ ಎದುರಾಗಿದ್ದ. ಮರೆತ ದಿನಗಳಿಗೆಲ್ಲ ಮರುಜೀವ ನೀಡಿದ್ದ, ಅವಳೊಳಗೆ ಅವಳನ್ನೇ ಮರಳಿ ತಂದಿದ್ದ, ಜನ್ಮದೊಳಗಿನ್ನೊಂದು ಜನ್ಮ ನೀಡಿದ್ದ. ಜನುಮಗಳ ಜೀವನವ ಜೊತೆಯಾಗಿ ಜತನದಲಿ ಜಗವ ಜಯಿಸುವ ಜೈತ್ರ ಜ್ಯೋತಿಯಾಗಲಿಲ್ಲ, ಕಣ್ಣೊಳಗೆ ಕಣ್ಣಾಗಿ ಅವನೊಳಗೆ ಒಂದಾಗಿ ದಾರಿ ತೋರುವ ಧಾತ್ರಿ ತಾನಾಗಲಿಲ್ಲ ಎಂದು ಕೊರಗಿ, ಕ್ಷಣದ ಸಂಕಷ್ಟದಲಿ ಬೆನ್ನಾಗಿ ಜೊತೆಯಿರದೆ ಕಷ್ಟಕ್ಕೆ ಬೆನ್ನು ಹಾಕಿದ ದಿನಕೆ ಮರುಗಲಾರಂಭಿಸಿದಳು. ನಡೆಯಾರದೆ ಎಡವಿ ಕಾಲಡಿಯ ಮರೆವವನ ಕೈಹಿಡಿಯಲಾರದೆ ಹೋದೆನೆಂದು ನೊಂದಳು. ಸಾವರಿಸಿ, ಒಮ್ಮೆಯಾದರೂ ಅವನನ್ನು ಕಣ್ತುಂಬ ಕಂಡು ಕ್ಷಮೆ ಕೇಳಬೇಕೆಂದುಕೊಂಡು ನಿಶ್ಚಯಿಸಿ ತಿರುಗಿದ್ದಳು ಅವನೆಡೆಗೆ.

ಅವನೆಡೆಗೆ ಕೈಚಾಚಿ ಅವನ ಕೈಯೊಳಗೆ ಕೈಯಿಟ್ಟು ಅವನ ನಡೆಯಲ್ಲಿ ನಡೆಯಾಗಿ ನಡೆವ ಅವನವಳನ್ನು ಕಂಡು ಮತ್ತೆ ನಿಟ್ಟುಸಿರಿಟ್ಟಳು. ಕೈಗೂಡಿಸಲಾಗದ ಕನಸು ಕಮರಿಹೋಗಲು  ಸ್ವಯಂ ಕಾರಣವೆಂದು ಪಶ್ಚಾತ್ತಾಪದ ಕಂಬನಿಯಿಟ್ಟಳು. ಕಣ್ಣಳತೆಯಿಂದ ದೂರಾಗುವವರೆಗೂ ಅವರಿಬ್ಬರನ್ನು ನೋಡುತ್ತಾ ಕುಸಿದು ಕುಳಿತಳು. ಸುತ್ತಲಿನ ಬೆಳಕು ಕಪ್ಪಾಗಲಾರಂಭಿಸಿತ್ತು, ಇರುಳ ನೀಗುತ ಬೆಳಗಲಾರಂಭಿತ್ತು ಆಗಸದಲ್ಲಿ ಒಂದೊಂದಾಗಿ ಚುಕ್ಕಿ ತಾರೆಗಳು.

 ತಾರೆಗಳು ನಗುತ್ತಾ ಆಗಸದಲ್ಲಿ ಬೆಳಕು ತುಂಬುತ್ತಿತ್ತು. ಮನಕೆ ಮುದವಿಡುವ ಬೆಳದಿಂಗಳೂ ಜೊತೆ ನೀಡುತಿತ್ತು. ಹೊಸತಾದ ಮಳೆಹನಿಯು ಭುವಿಯ ಮಿಲನದಿ ಮಿಂದು ಮಣ್ಣ ಪರಿಮಳವನ್ನು ಸುತ್ತ ಪಸರಿಸುತಲಿತ್ತು. ಜಗದ ಕಣ್ಣುಗಳಲ್ಲಿ ಕತ್ತಲೆಯೇ ತುಂಬಿದ್ದರೂ ಅವನ ಅಂತಃಚಕ್ಷುಗಳೆರಡೂ ಬೆಳಕು ಕಂಡಿತ್ತು. ಕೈ ಹಿಡಿದಿರುವ ಕರಗಳೆಷ್ಟೋ ಕತ್ತಲಿಗೆ ನೂಕುತಿರಲು ಕಾರಣವೇ ಇಲ್ಲದಿರುವ ಕರವು ಬೆಳಕ ಉರಿಸಿತ್ತು. ಇಹದೊಳಗಿನ ಬಂಧನಗಳು ಬರಿದಾಗುತ ಬದುಕುತಿರಲು ಬದುಕಿನ ಬಾಂಧವ್ಯ ಬಯಸಿ ಹೊಸತು ಬದುಕೊಂದರಳಿತ್ತು. ಕನಸೊಳಗಿನ ಹಾದಿ ಕಂಡು, ಅದನ್ನೇ ಬಯಸಿ ಅರಸಿ ಹೊರಟವನು ಕಥೆಯಾಚಿನ ಕಿರು ಪಾತ್ರಕೆ ಹೊಸತು ಜೀವವಾದ, ಕಥೆಯೊಳಗೊಂದು ಕಥೆಯಾದ.