Nov 27, 2010

ಮರೆವ ನಿನ್ನೆಯ ಹೆಜ್ಜೆಗಳೆಡೆಯಲ್ಲಿ...

ಬೆಳಗಿನಿಂದ ನೆಲಸೇರಿದ್ದ ತರಗೆಲೆಗಳೆಲ್ಲ ಚದುರಿ ದೂರ ಬೀಳುತ್ತಿತ್ತು. ಗಾಳಿ ಮತ್ತೊಂದಷ್ಟು ಹಣ್ಣೆಲೆಗಳನ್ನು, ಚಿಗುರೆಲೆಗಳನ್ನೂ ನೆಲ ಸೇರಿಸುತ್ತಾ ಸಾಗಿತ್ತು. ಕಾಲ ಕೈಬಿಟ್ಟಿದ್ದ ಎಲೆಗಳು ನಡೆವ ಕಾಲಡಿ ಬಿದ್ದು ನಿಸ್ಸಹಾಯಕ ನಿಟ್ಟುಸಿರಿಟ್ಟು ಉಸಿರು ಬಿಟ್ಟಿದ್ದವು. ನಡೆವ ನಡೆಗಳಿಗೆ ಮೆತ್ತನೆಯ ಸುಖಾನಂದವೀಯುತ್ತಿದ್ದವು. ಚಿಗುರೊಡೆದ ಪುಟ್ಟ ಹಸಿರೆಲೆಗೆ ಬದುಕಲು ಜಾಗ ಬಿಟ್ಟಿದ್ದವು, ಮರದೊಳಗೆ ಮತ್ತೆ ಕನಸಾಗಿ ಹುಟ್ಟಿದ್ದವು. ಇಂಥಾ ವಿಕ್ಷಿಪ್ತ, ವರ್ಣನಾತೀತ ತರಂಗಗಳ ನಡುವೆಯೂ ವಿವರಿಸಲಾಗದ ನೂರು ಯೋಚನೆಗಳು ಅವಳೊಳಗೆ ಬೇರು ಬಿಟ್ಟಿದ್ದವು. ಅಲ್ಲೊಮ್ಮೆ ಸುಳಿದ ತಂಗಾಳಿ ಅವಳ ಮುಂಗುರುಳನ್ನು ಮುದ್ದಿಸಿ ಮಾಯವಾಯ್ತು. ಅವನ ಮನದೊಳಗೆ ಅವರ ಕನಸು ಮಾಸದ ಗಾಯವಾಯ್ತು, ಅವಳಲ್ಲಿ ಬತ್ತದ ಕಂಬನಿಯಾಯ್ತು, ಪ್ರೀತಿಯ ಹೊಸತೊಂದು ಕಥೆಯಾಯ್ತು.

ಕಥೆಯಾಯ್ತು, ಕವನವಾಯ್ತು, ಪ್ರೀತಿ ಜೊತೆಯಲ್ಲಿ ಅವರ ಕನಸು ನವಿಲುಗರಿಯಾಯ್ತು. ನೆನಪ ಪುಸ್ತಕದ ಪುಟ ಪುಟದ ನಡುವೆ ಬಚ್ಚಿಟ್ಟು, ಮರಿಯಿಟ್ಟು ನೂರಾಯ್ತು. ಬಣ್ಣ ಬಣ್ಣದ ಕಣ್ಣು ಬಣ್ಣ ತುಂಬುತ ಅವರ ಮನಸ ತುಂಬಿತ್ತು. ಕಾತರಿಸುವ ಕ್ಷಣಗಳು ಅವರೊಳಗೆ ದಿನದಂತಾಗುತ್ತಿದ್ದರೆ, ಜೊತೆಯಿರುವ ದಿನಗಳು ನಿಮಿಷದಂತೆ ಕಳೆಯುತಿತ್ತು. ಅವರಲ್ಲಿ ನಿನ್ನೆಯ ನೆನಪಿರಲಿಲ್ಲ, ನಾಳೆಯ ಮಾತಿರಲಿಲ್ಲ, ವಾಸ್ತವವೇ ಆನಂದದ ದಿನವಾಗಿರುತ್ತಿತ್ತು. ಅವಳ ಕಣ್ಣ ನೋಟಗಳಲೇ ಕಳೆದು ಹೋಗುತ್ತಿದ್ದ ಅವನು, ಅವನ ಮಾತ ಮಂದಿರದೊಳಗೆ ಹಾದಿ ಮರೆಯುತ್ತಿದ್ದ ಅವಳು, ಬಾನ ಮೋಡದ ಜೊತೆಯ ಬಾನಾಡಿಗಳಂತಾಗಿದ್ದರು. ಲೋಕದ ಪರಿವೆಯನೆಲ್ಲ ಮರೆತ ಪ್ರಣಯಿಗಳಾಗಿದ್ದರು. ಅವಳ ಆಸೆಯಂತೆ ಮುಂದೊಂದು ದಿನ ಜೊತೆಯಾಗುವವರಿದ್ದರು, ಜೊತೆ ನಡೆಯುವವರಿದ್ದರು ಅವರಿಬ್ಬರು.

ಅವರಿಬ್ಬರು ಮಾತ್ರ ಅಲ್ಲುಳಿದವರು. ಪಶ್ಚಿಮ ಘಟ್ಟದ ಪರ್ವತ ಪಂಕ್ತಿಯ ಹಿಂದೆ ಸಂಜೆಯ ಸೂರ್ಯನ ಮೋರೆಯೂ ಕಾಣದಾಯ್ತು. ಮೆಲ್ಲ ಮೆಲ್ಲಗೆ ಅವರ ನೆರಳೂ ಕಾಣದಾಗದಾಯ್ತು. ಅವಳ ಕನಸೆಲ್ಲಾ ಕರಗಿ ಮಣ್ಣಾಗಿತ್ತು. ರಕ್ತ ಹೀರಿದ ಜಿಗಣೆ ಹಣ್ಣಾಗಿ ಬಿದ್ದು, ಕಚ್ಚಿದ್ದ ಜಾಗದಿಂದ ನೆತ್ತರಧಾರೆ ಧರೆ ಸೇರುತ್ತಿತ್ತು. ಕಣ್ಣೀರು ಖಾಲಿಯಾಗಿತ್ತು, ಅಲ್ಲಿ ದುಃಖ ಮಡುಗಟ್ಟಿತ್ತು. ಕಾಲುಗಳಿಗೆ ಹಿಡಿದಿದ್ದ ಜಿಗಣೆಗಳನ್ನು ಹೆದ್ದುಂಬೆ ಎಲೆಯಿಂದ ಒಂದೊಂದಾಗಿ ಬಿಡಿಸುತ್ತಿದ್ದ ಅವನು. ರಕ್ತದ ಬಿಸಿ ಹುಡುಕಿ ಗೇಣು ಹಾಕುತ್ತಾ ಬಳಿಬರುವುದನ್ನು ನಿಶ್ಚಲವಾಗಿ ನೋಡುತ್ತಾ ನಿಂತಿದ್ದ ಅವಳು. ತನ್ನ ಕನಸನ್ನು ಹೀರಿ ಇಲ್ಲವಾಗಿಸಿದ ವಿಷ ಕ್ಷಣಕ್ಕಿಂತ ಆ ವಿಚಕ್ಷಣ ಜಂತುವೇ ಲೇಸೆಂಬಂಥಾ ನೋಟ ಅವಳಲ್ಲಿತ್ತು. ಮೆಲ್ಲಗೆ ತುಂಬುತ್ತಿರುವ ಮಂಜೂ ಅವಳಲ್ಲಿ ತಂಪು ತುಂಬಲು ವಿಫಲವಾಯ್ತು, ಹಾಗೇ ಅವನ ಮಾತುಗಳೂ ಸಹ. ರಕ್ತ ಮೆಲ್ಲನೆ ಹೆಪ್ಪುಗಟ್ಟುತ್ತಿತ್ತು. ಅವಳ ಮಾತು ಅಕ್ಷರಗಳಾಗುತ್ತಾ, ಪದ, ಪದಪುಂಜಗಳಾಗುತ್ತಾ, ವಾಕ್ಯಗಳಾಗುತ್ತಾ ಅವಳೊಳಗಿನ ವೇದನೆ ವಿದಿತವಾಗುತ್ತಲಿತ್ತು. ಕೆಲವು ಅರ್ಥವಾಗದಂತಿತ್ತು, ಮತ್ತೂ ಕೆಲವು ಅರ್ಥ ಕಳೆದುಕೊಂಡಂತಿತ್ತು. ಒಂದಕ್ಕೊಂದು ಸಂಬಂಧ ಕಾಣದಂತಹಾ ಅವಳ ತುಮುಲ ಭಾವಗಳು ಅವನನ್ನು ಅವ್ಯಾಹತ ಆತಂಕಕ್ಕೆ ದೂಡಿತು. ಅವನೊಳಗೆ ಅವನನ್ನೇ ಮರೆಸಿತ್ತು.

ಮರೆಸಿತ್ತು ಅಲ್ಲಿನವರ ಮಾತು ಆ ಮೌನವನ್ನು, ಅವಳೊಳಗಿನ ನಗುವನ್ನೂ. ಸಹ್ಯ ಸಮಾಜದೊಳಗೆ ಸವ್ಯ ನಿಯಮಗಳೇ ಸರಿ. ಬದಲಾವಣೆಯ ಗಾಳಿ ಹೆಚ್ಚು ಸಮಯ ನಿಲಲಾರದಲ್ಲಿ. ಅಲ್ಲಿರುವುದು ಎರಡೇ ನಿಯಮ. ಒಂದೋ ಬದಲಾದವರನ್ನು ಬದಲಾಯಿಸುವುದು ಅಥವಾ ಬದಲಾದವರನ್ನು ಬದುಕಲಾರದಂತಾಗಿಸುವುದು. ಅಲ್ಲಿಯೂ ಅದೇ ಆಯ್ತು. ಅವಳು ಅವನಕ್ಕಿಂತ ಕೆಲ ತಿಂಗಳು ದೊಡ್ಡವಳೆಂಬ ಕಾರಣ ಅಲ್ಲಿನವರ ಅಸಮಾಧಾನಕ್ಕೆ ಮೂಲ. ಅಂಥವರ ನಡುವೆ ಅಂತರಪಟ ಸರಿಯುವುದು ಶ್ರೇಯಸ್ಸಲ್ಲ, ಶುಭವಲ್ಲವೆಂಬುದೇ ಅವನು ಅವಳಿಂದ ದೂರಾಗಲು ಹೇತು. ಅವನ ಮನೆಯವರಿಗೆ ಅದೊಂದೇ ವಿಷಯ ಸಾಕಾಗಿತ್ತು ಅವಳನ್ನು ಅವನಿಂದ ದೂರವಿಡಲು. ಅವಳ ಎಷ್ಟೋ ಮರುಪ್ರಯತ್ನಗಳೂ ಮಣ್ಣುಪಾಲಾಯ್ತು. ಆದರೂ ಅವರ ನಿಶ್ಕಲ್ಮಷ ಅನುರಾಗ ಅನಂತವಾಗುತ್ತಲೇ ಇತ್ತು. ಆ ಪ್ರೀತಿ ಅವಳ ಮನದ ಭಿತ್ತಿ ಭಿತ್ತಿಗಳೊಳಗೆ ಅನುರಣನೆಯಾಗುತ್ತಲಿತ್ತು. ಅವರ ಪ್ರೇಮ ಪೂಜನೀಯವಾಗುತ್ತಲಿತ್ತು, ಮನಸು ಪರವಷವಾಗುತ್ತಿತ್ತು. ಅವರಲ್ಲಿ ಭಾವಾತೀತ ಬಂಧಗಳ ಬಂಧನ ಬಿಗಿಯಾಗುತ್ತಿತ್ತು, ಉಸಿರುಗಟ್ಟಿಸುವಷ್ಟು... ಉಸಿರು ನಿಲ್ಲಿಸುವಷ್ಟು... ಉಸಿರ ಮರೆಸುವಷ್ಟು ಎಂಬುದು ಅವಳಿಗೂ ಗೊತ್ತಿತ್ತು; ಅದವನಿಗೂ ತಿಳಿದಿತ್ತು. ವಿಪರ್ಯಾಸ, ಏನೂ ಮಾಡಲಾಗದ ಅಸಹಾಯಕತೆ. ಅವರು ಬಹುವಚನವಾಗದಿದ್ದರೂ ಏಕವಚನವಿಹಿತರಾದರು, ವೇದನಾವಿರಹಿತ ಹಿತಮನಸ್ವಿಗಳಾದರು. ಸಮಾಜದ ಕಣ್ಣೊಳಗೆ ಸಾಮಾನ್ಯರಾದರು, ಮತ್ತೆ ಪಾತ್ರಗಳಾಗಿ ಕೊನೆಯಿರದ ಕಥೆಯಾದರು. ಹಾಗೆ ಅವಳಿಗಾಗಿ ಹಂಬಲಿಸುವ, ಪರಿತಪಿಸುವ ಇನ್ನೊಬ್ಬನಲೂ ಅವಳು ಕನಸಾದಳು. ಅವನ ಬಯಕೆ ಮಾತಾಡಿ ಸೋತಿತ್ತು; ಇವನ ಬಯಕೆ ಮಾತ ಮರೆತು ಸೋತಿತ್ತು..., ಸತ್ತಿತ್ತು. ಸಾವಿಗಿಂತಲೂ ಸುಖದ ನೀರವತೆ ಅಲ್ಲಿತ್ತು. ಅವರ ಕೊನೆಯ ವಿದಾಯದ ಮಾತೂ ಮಾನ ತಾಳಿತುಪರದೆ ಸರಿಸದೆ ಕುಣಿವ ತೊಗಲು ಗೊಂಬೆಗಳಾಗಿದ್ದರು, ವಾಸ್ತವದ ವಸ್ತುಗಳಾಗಿದ್ದರು, ವಚನ ವಿರಹಿತರಾಗಿದ್ದರು... ಅವರಿಬ್ಬರೂ..!

ಅವರಿಬ್ಬರೂ ಇಬ್ಬರಾಗಿಯೇ ಇದ್ದುಬಿಟ್ಟರು. ಕಳೆದ ನಿನ್ನೆಗಳ ನವಿರು ಸಿಂಚನ ಅವಳಲ್ಲಿ ಸ್ವಾತಿಮಳೆಗರೆಯುತ್ತಿತ್ತು. ಬರ-ಬರುತ್ತಾ ಬರ ಬಾರದಿದ್ದರೂ, ಇಬ್ಬನಿ ಕಳೆ ಕಟ್ಟಿರುತ್ತಿತ್ತು.., ಕಣ್ಣೆವೆಯೊಳಗಿನ ತಳಿರುಗಳಲ್ಲಿ, ಹಸಿರು ಕನಸ ಬಳ್ಳಿಗಳಲ್ಲಿ, ಮನದ ಹೂದೋಟಗಳಲ್ಲಿ. ಕಹಿ ದಿವಸ ಮರೆಯಲು ಯತ್ನಿಸಿದ ವ್ಯರ್ಥ ಪ್ರಯತ್ನಗಳೆಲ್ಲ ಕಂಬನಿಯಾಗಿ ಜೊತೆಯಾಗುತ್ತಿತ್ತು. ಕಳೆದ ಕನಸಿಗೆ ನೆರಳಾಗಿ ಒಂದು ಪುಟ್ಟ ಹೃದಯ ಅವಳ ಹೃದಯದಲಿ ಜಾಗ ಪಡೆಯಿತು. ಹೊಸ ನಿರೀಕ್ಷೆಯೊಂದಿಗೆ ಹೊಸತೊಂದು ಜೀವನ ಜಗವನ್ನು ಜಯಿಸಲು ಹೊರಟಿತ್ತು. ಸಹ್ಯ ಸಮಾಜದ ಸನಿಹವಾಗಲು ಸರ್ವ ಸಮ್ಮುಖದಲ್ಲಿ ಸಪ್ತಪದಿ ತುಳಿದು ಅವರು ಸನಿಹವಾದರು. ಪ್ರೀತಿ, ಮೋಹದ ಪರಿಧಿ ವಿಸ್ತಾರಗೊಳ್ಳುತ್ತಾ ಕೊನೆಗೆ ತ್ಯಾಗ, ನಿಸ್ವಾರ್ಥತೆಗಳೂ ಅದರೊಳಗೆ ಸಿಕ್ಕು ಪರಿಭ್ರಮಿತವಾಗಲಾರಂಭಿಸುತ್ತದೆ. ತ್ಯಾಗ, ನಿಸ್ವಾರ್ಥತೆಗಳ ಮುಸಿಕಿನೊಳಗೆ ಏಕಾಂತ ಯಾತನೆಗಳು ತುಂಬಿ ಬದುಕು ಬಂಧುರವೆನಿಸಲಾರಂಭಿಸುತ್ತದೆ, ಭ್ರಮನಿರತವಾಗಿಬಿಡುತ್ತದೆ. ಬದಲಾಗಬಯಸದ ಭಾವನೆ ಮತ್ತೆ ಬದಲಾಗುವತ್ತ ಒಲವು ತೋರುತ್ತದೆ. ಅಂಥಾ ಹಾದಿಯಲ್ಲಿ ಬದುಕು ಮತ್ತೆ ಸೋಲಬಹುದು, ಗೆಲುವ ಕಾಣದಿರಬಹುದು, ಗೆಲ್ಲಲೂಬಹುದು. ಅಂತಹುದೊಂದು ಅತೀತ ಆಸೆಯ ಆಸರೆಯೊಂದಿಗೆ ಅವಳು ನಡೆದಿದ್ದಳು, ನಡೆಯುತ್ತಿದ್ದಳು... ಮರೆವ ನಿನ್ನೆಯ ಹೆಜ್ಜೆಗಳೆಡೆಯಲ್ಲಿ... ಅವರದೇ ನೆ ರ ಳಿ ನ ಲ್ಲಿ.

Jul 8, 2010

ಅವನ ಕನಸಿನ ಕನಸು; ಅವಳ ಕನಸು

ಮೊದಲ ಮಳೆಗಾಲದ ಒಂದು ಮುಸ್ಸಂಜೆ. ಗಾಳಿಯೊಂದಿಗೆ ಮೆಲ್ಲನೆ ಮೇಲೆದ್ದು ಮುಸುಕುತ್ತಿರುವ ಮಂಜು. ಮಂಜಿನ ಮುತ್ತಿನಂತಹಾ ಸಣ್ಣ ಬಿಂದುಗಳು ಅವಳ ಮುಂಗುರುಳನ್ನು ಅಪ್ಪಿಕೊಂಡಿತ್ತು. ಮುಂಜಾವ ಇಬ್ಬನಿಯಂತೆ ಅವಳ ಮೌನ ಅಧರಗಳನ್ನಲಂಕರಿತ್ತು. ರೆಪ್ಪೆ, ಹುಬ್ಬುಗಳನ್ನು ಮುತ್ತಿಟ್ಟಿತ್ತು, ಅವನ ಚಿಗುರು ಮೀಸೆಯನ್ನೂ. ಅರ್ಥವಾಗದ ನೂರು ಚಿತ್ರ ಗೀಚಿದ ಮುಂಗಾರ ಕರಿ ಮುಗಿಲು, ಬೆಲ್ಲ ತಾಗಿದ ಅವಳ ಗಲ್ಲ ಚುಂಬಿಸಿ ಸುಳಿವ ಕಳ್ಳ ಸುಳಿಗಾಳಿ, ಮಳೆಯ ಬರವನು ಬಯಸಿ ಕೂಗಿ ಕರೆಯುವ, ಕಾಯ್ವ ಮಳೆಹುಳದ ತನನ. ಮನದ ಪುಟ-ಪುಟಗಳಲಿ ಪ್ರಕೃತಿಯಾಗಿತ್ತೊಂದು ಪ್ರೇಮಗಾನ. ಆ ತಣ್ಣನೆಯಲ್ಲಿ ಅವನ ಬೆಚ್ಚನೆಯ ಕೈಯೊಳಗೆ ಕೈಯಿರಿಸಿ ಕುಳಿತಿದ್ದ ಅವಳಲ್ಲಿ ಅವಿಸ್ಮರಣ ಅನುಭಾವ. ಜೋಗದ ಮಡಿಲಲ್ಲಂದು ಹೃದಯಸ್ಪರ್ಶಿ ಅನುಭವ. ಏಕಾಂಗಿಯಾಗಿ, ಸೊರಗಿ ಸುರಿಯುತ್ತಿದ್ದ ಜಲಧಾರೆಯಲ್ಲೂ ಪ್ರೀತಿಯ ಸಲಿಲ ತುಂಬಿತ್ತು. ನಿನ್ನೆಗಳನ್ನು ಮರೆತ ನಿಶ್ಚಿಂತ ನಗುವಿತ್ತು, ಅವಳಲ್ಲಿ ಸಂತೃಪ್ತಿಯಿತ್ತು, ಅವನನ್ನು ಜೊತೆಪಡೆದ ಸಂಭ್ರಮವಿತ್ತು.

ಸಂಭ್ರಮವಿತ್ತು, ತುಂಬಿದ ಸಂತೋಷವಿತ್ತು. ಹರಕೆ-ಹಾರೈಕೆಗಳು ವಧೂ-ವರರ ಹಾರೈಸುತಿತ್ತು. ಹೋಮ-ಹವನದ ಹೊಗೆಯೂ ಅಲ್ಲೆಲ್ಲಾ ತುಂಬಿತ್ತು. ಹಲವರಿಗೆ ಹಸಿವ ಹೊಗೆ ಊಟ ನೆನಪಿಸಿತ್ತು. ಮದುವೆ ಮಂಗಳವಾಗಿ ಮುಗಿದಿತ್ತು. ಹೊಗೆ ಕರಗಿದಂತೆ ಅಲ್ಲಿ ಜನವೂ ಕರಗಿತ್ತು. ಬಂಧುಗಳ, ಸ್ನೇಹಿತರ, ಮನೆಯ ಬಳಗ, ಕಳೆದ ಮದುವೆಯ ಕ್ಷಣ ಮಾತ್ರ ಅಲ್ಲಿ ಉಳಿದಿತ್ತು. ಮದುಮಗಳು ತವರು ಮನೆಯ ತೊರೆಯಬೇಕಿತ್ತು. ಎಲ್ಲರ ಕಣ್ಣೂ ತುಂಬಿತು. ಬೇಸರಿಸಿ ಮೋಡವೂ ಕಂಬನಿಯಿರಿಸಿತು. ವರನ ಮನಸೆಡೆ ಎಂದೋ ನಡೆದಾಗಿತ್ತು, ವರನ ಮನೆಯೆಡೆ ಈಗ ನಡೆಯಬೇಕಿತ್ತು. ಮಳೆ ನಿಂತು ನಿಮಿಷದಲ್ಲಿ ಅವರ ವಾಹನ ಹೊರಟಿತು. ಮನೆಯಿಂದ ದೂರ, ಮನಸಿಂದಲೂ. ಹಳೆ ನೆನಪ ಅಲ್ಲುಳಿಸಿ, ಕೆಸರಿನಲಿ ಹೆಜ್ಜೆ ಗುರುತುಳಿಸಿ, ಅಳುವಿನಲೇ ವಿದಾಯ ತಿಳಿಸಿ ದೂರವಾಗಿದ್ದಳು. ವರನ ಕೈ ಹಿಡಿದವಳು, ಹೊರಳಿ ನಮ್ಮೆಡೆ ಕೈ ಬೀಸಿದ್ದಳು, ನವ-ವಧು ನಮ್ಮೆಲರನ್ನೂ ಬಿಟ್ಟು ಹೋಗಿದ್ದಳು.

ಬಿಟ್ಟು ಹೋಗಿದ್ದಳು... ಅವನನ್ನು ಎಂದೆಂದಿಗೂ ಬಿಟ್ಟು ದೂರ ಹೋಗಿದ್ದಳು. ದಿನ ರಾತ್ರಿ ಬಾನಲ್ಲಿ ಮಿನುಗುವ ತಾರೆಯಾಗಿದ್ದಳು, ಮನದ ಗುಡಿಯೊಳಗವಳು ನೆನಪ ಹಣತೆಯಾಗಿದ್ದಳು. ಅವನ ಕಣ್ಮುಂದೊಮ್ಮೆ, ಅವನ ಮದುವೆಯ ದಿನಗಳು ಬಂದು ಹೋಯ್ತು. ಕಳೆದ ಕ್ಷಣಗಳು ತಿರುಗಿ ಬಳಿಬಾರದಂತೆ ಪ್ರಯತ್ನಿಸಿದ್ದೆಲ್ಲಾ ವ್ಯರ್ಥವಾಯ್ತು. ಅರಿವಿರದೆ ಎರಡು ಹನಿ ಕಣ್ಣ ದಾಟಿ ನೆಲಸೇರಿತು.

ನೆಲಸೇರಿತು ಅವನ ಕನಸ ಗೋಪುರವೆಲ್ಲ ಅಂದು ಅವಳು ಕನಸಾದಂದು. ಹೊಸ ಜೀವವೊಂದು ಜಗದಿ ಕಣ್ಣು ತೆರೆಯುವ ಮೊದಲೇ, ಮುಗ್ಧ ಜೀವಗಳೆರಡೂ ಕಣ್ಣ ಮುಚ್ಚಿತ್ತು. ದಾರಿ ತೋರುವ ಬೆಳಕೇ ಅವನ ಕಣ್ಣ ಚುಚ್ಚಿತ್ತು. ನಾಳೆ ಹೀಗಿರಬಹುದೆಂದಿದ್ದ ಆಸೆಯೇ ಕಮರಿಹೋಗಿತ್ತು. ಆದರೂ ನೋವು ನುಂಗುತ, ನಗುತ ಎಲ್ಲರೊಳು ಬೆರೆತಿದ್ದ. ಹೊಸತು ನಾಳೆಯ ನಂಬಿ ದಿನ ದೂಡುತಿದ್ದ. ಕನಸ ತರುವ ಸುಖ ನಿದ್ದೆಯ ಮರೆತಿದ್ದ, ತನ್ನವಳ ನೆನಪ ಸುಳಿಯೊಳಗೆ ಸಿಲುಕಿ ಕಳೆದುಹೋಗಿದ್ದ.

ಕಳೆದುಹೋಗಿದ್ದ ಕಾಲ ಮತ್ತೆ ಸಿಕ್ಕಿದಂತನಿಸಿತು ಅಲ್ಲಿ ಅವಳನ್ನು ಕಂಡು. ಕಳೆದ ನಿಮಿಷಗಳೆಲ್ಲ ಮತ್ತೆ ಅವನೊಡನೆ ನಡೆಯುತ್ತಿರುವಂತೆ ಭಾಸವಾಯ್ತು. ಭಾವನೆಯ ಸುಳಿಯೊಳಗೆ ಸಿಕ್ಕು ಭೂಮಿ ಬಾಯ್ದೆರೆದಂತೆ ಅವನ ಪುಟ್ಟ ಹೃದಯಕ್ಕನಿಸಿತು. ನಡೆಯುತ್ತಿರುವ ನಿಮಿಷಗಳು ನಿಂತು ಮತ್ತೆ ಓಡಿ ಎದೆಬಡಿತವನ್ನು ಹಿಂದಿಕ್ಕಿದಂತೆ, ಮೆಟ್ಟಿ ಮರೆತಿದ್ದ ಹೆಜ್ಜೆಗಳೇ ಮರಳಿ ಹೆಜ್ಜೆಗಳಾದಂತೆ, ತನ್ನವಳೇ ತನ್ನೆದುರು ನಿಂತು ನಕ್ಕಂತೆ ಅನಿಸಿತು. ಮದುವೆಯ ಹಿಂದಿನ ದಿನವೇ ಅವಳನ್ನು ಕಂಡಿದ್ದರೂ ಅವನಲ್ಲಿ ಇಂತಹದೊಂದು ತುಮುಲ, ತುಡಿತ, ತಳಮಳದ ಅಲೆ ಎದ್ದಿರಲಿಲ್ಲ. ಗೆಳತಿಯ ಸನಿಹ ತೊರೆದ ವೇದನೆ ಅವಳ ಕಣ್ಣಲ್ಲೂ ಇಣುಕಿತ್ತು. ಕಳೆದ ದಿನಗಳ ಮೆಲುಕು ಅವಳೊಳಗೂ ನಡೆದಿತ್ತು. ನೋಡುವವರಿಗೆ, ಜೊತೆಕುಳಿತು ಪರಸ್ಪರ ವೇದನೆಯ ಒಸಗೆ ಪಡೆದವರಂತೆ ಕಾಣುತ್ತಿದ್ದರು ಅವರಿಬ್ಬರೂ.

ಅವರಿಬ್ಬರೂ ಹಿಂದಿನ ದಿನದಿಂದಲೇ ಪರಿಚಿತರು. ವಧುವಿನ ಗೆಳತಿ ಅವಳು, ಓರಗೆಯವನವನು. ಅವತ್ತಿನಿಂದಲೂ ಜೊತೆಯಲ್ಲಿ ಮಾತಾಡಿದ್ದರು, ಓಡಾಡಿದ್ದರು, ತಮಾಷೆ ಮಾಡಿದ್ದರು, ನಕ್ಕಿದ್ದರು, ನಗಿಸಿದ್ದರು. ಪ್ರತಿ ಕ್ಷಣದ ಸಂತೋಷ ಸೂರೆಮಾಡಿದ್ದರು. ಗುಬ್ಬಿ ಕೂಗಿನ ಗಡಿಯಾರ ಅವರನ್ನು ಎಚ್ಚರಿಸಿತು, ಮತ್ತೆ ವಾಸ್ತವಕ್ಕೆ ಮರಳಿದ್ದರು.

ಮರಳಿದ್ದರು ಅವರವರ ಊರಿಗೆ, ಅವರವರ ಕೆಲಸಗಳಿಗೆ. ಮನಸಿಲ್ಲದ ಮನಸಿನಿಂದ ಮಾಮೂಲಿ ದಿನಗಳಿಗೆ, ಅರ್ಧಕ್ಕೇ ಬಿಟ್ಟಿದ್ದ ಪ್ರಶ್ನೆಗಳಿಗೆ, ಹರಿದ - ಗೀಚಿದ ಪುಟಗಳಿಗೆ, ಮುಗಿಸಿರದ ಉತ್ತರಗಳಿಗೆ, ನಿದ್ರೆಗೆ ದೂಡುವ ನಿತ್ಯದ ಕುರ್ಚಿಗಳಿಗೆ. ಆದರೆ, ಅವಳ ಕೆಲಸಗಳಲ್ಲಿ ಹೊಸತನವಿತ್ತು. ಹರಿದ ಪುಟಗಳಲೂ ಅವನ ನೆನಪ ಗೀಚಿತ್ತು. ನಿದ್ರೆ ತರಿಸುವ ಕುರ್ಚಿ ಹೊಸಕನಸ ತೋರಿತ್ತು. ಹೇಳಲಾಗದ ಮಾತು ಹೃದಯ ತುಂಬಿತ್ತು.

ಹೃದಯ ತುಂಬಿ ಬಂದಿತ್ತು ಅವಳಿಗೆ ಜೋಗದ ಒಡಲಿನಲ್ಲಿ, ತಲೆಯಿರಿಸಿ ಮಲಗಿದ್ದಳು ಅವನ ಮಡಿಲಿನಲ್ಲಿ. ಸಿಹಿಯಾದ ಕಣ್ಣೀರು ಅವಳ ಗಲ್ಲ ದಾಟಿತ್ತು. ಅವನ ಪ್ರೀತಿಯ ಪಡೆದ ಆ ದಿನವ ನೆನೆದು, ಕಣ್ಣಲ್ಲಿ ಕಣ್ಣಿಟ್ಟು ಸಮ್ಮತಿಸಿದ ಆ ಸಂಜೆಯ ನೆನೆದು.

ನೆನೆದು ನೀರು ತೊಟ್ಟಿಕ್ಕುತ್ತಿತ್ತು ಮಳೆಯಿಂದ ತಡವಾಗಿ ಮನೆ ಸೇರಿದಂದು. ತಲೆಯೊರಸಿ, ಬಿಸಿ ಕಾಫಿ ಹೀರುವ ಮೊದಲೇ ಅಮ್ಮನ ಕಣ್ಣಲ್ಲಿ ದೃಷ್ಟಿ ನೆಟ್ಟಿದ್ದಳು. ಅವನನ್ನು ಕಂಡ ಮೊದಲ ದಿನದಿಂದ ಹಿಡಿದು ಅಂದಿನವರೆಗಿನ ಅವಳ ಮನದ ಮುನ್ನೂರು ಮಾತುಗಳನ್ನು ಅವರ ಮುಂದಿಟ್ಟಿದ್ದಳು, ಮನದ ಮೌನ ಮುರಿದಿದ್ದಳು. ಸಮಾಧಾನದ ನಗೆ ನಕ್ಕು ಬರಿದಾದ ಲೋಟ ಅಮ್ಮನ ಕೈಯೊಳಗಿರಿಸಿದ್ದಳು. ಒಂದು ನಿಮಿಷ ಅಲ್ಲೆಲ್ಲರೂ ಸ್ಥಬ್ಧ. ಸಾವರಿಸಿ, ಅವರವರ ಒಪ್ಪಿಗೆ ಸೂಚಿಸಿದ್ದರೂ, ’ವಿಧುರನೊಂದಿಗೆ ವಿವಾಹ’ ಎಂಬುದಕ್ಕೆ ಮಾತ್ರ ವಿರೋಧವೆದ್ದಿತು. ಅಂದು ಅವಳ ಪಾಲಿನ ಅನ್ನ ಅಲ್ಲೇ ಉಳಿದಿತ್ತು. ನಿದ್ದೆಯಿಲ್ಲದೆ ರಾತ್ರಿ ಯೋಚನೆಯಲ್ಲೇ ಕಳೆದಿದ್ದಳು. ಮನೆಯವರು ಒಪ್ಪಿದರೂ ಸುತ್ತಲಿನ ಸಮಾಜ ಸುಮ್ಮನಿರುವುದೇ..? ಎಂಬುದೇ ಎಲ್ಲರ ಚಿಂತೆ. ದಿನಾ ರಾತ್ರಿ ಉಪವಾಸ, ಅವನ ನೆನಪ ಉಪಾಸನೆಯಲ್ಲೇ ವಾರ ಮೀರಿತು. ಕೊನೆಗೂ ಮನೆಯವರ ಒಪ್ಪಿಗೆ ಸಿಕ್ಕಿತು. ಅವಳ ಒಪ್ಪೊತ್ತು ಮುಗಿದಿತ್ತು.

ಮುಗಿದಿತ್ತು ಅವಳ ಸಂಪು, ಆದರೂ ಕೇಳ ಸಿಗಲಿಲ್ಲ ಅವನ ಒಪ್ಪಿಗೆಯ ಮಾತ ಇಂಪು. ಹುಚ್ಚು ಸಮಾಜದ ಜೊತೆಗೆ ಸೆಣಸಲು ಅವನು ಸಿದ್ಧನಿರಲಿಲ್ಲ. ಅವನನ್ನು ಪ್ರೀತಿಸಿದ ಮನಸನ್ನು ನೋಯಿಸಲೂ ಮನಸಿರಲಿಲ್ಲ. ತನ್ನವಳ ಹೃದಯವನ್ನು ಅವಳಿಗೆ ನೀಡಲೂ ತಯಾರಿರಲಿಲ್ಲ. ಅವಳೆಡೆಗೆ ಅಂದು ಅಂತಹಾ ಭಾವನೆಯಾದರೂ ಯಾಕೆ ಬಂತೋ ಎಂದು ಅವನನ್ನೇ ಹಳಿಯಲಾರಂಭಿಸಿದ. ಭಸ್ಮ ಧರಿಸಿಯೂ ಬದಲಾಗದ ಹಣೆಬರಹವನ್ನು ಬದಲಾಯಿಸಲು ಬಯಸಿ ಸೋತುಹೋಗಿದ್ದ. ಅವಳ ಮನಸಿಗೆ ಕೊನೆಗೂ ಸೋತುಬಿಟ್ಟಿದ್ದ. ತನ್ನೊಳಗೆ ತನ್ನವಳ ಸೋತು ಗೆದ್ದಿದ್ದ, ಗೆದ್ದು ಸೋತಿದ್ದ.

ಸೋತಿದ್ದ ಮನಸೆರಡೂ ಒಂದಾಗಿತ್ತು ಜೋಗದ ಅಂಗಳದಲ್ಲಿ, ಮಳೆ ಹನಿಗಳ ಇರಸಲಿನಲ್ಲಿ, ಭಾವನೆಗಳ ಬಂಧನದಲ್ಲಿ, ಕೊನೆಯಿಲ್ಲದ ಕನಸುಗಳಲ್ಲಿ. ಜಗದ ಕಣ್ಣೊಳಗಿನ ಹುಚ್ಚು ಬಯಕೆ ಅವಳ ಕನಸಾಗಿತ್ತು. ತನ್ನವಳಿಗೆ ಮುಡಿಪಾದ ಅವನ ಮನಸು ಅವಳ ಇಷ್ಟವಾಗಿತ್ತು. ಅನಾಥೆಯೆನಿಸದ ಅನಾಥ ಬದುಕು ಅವಳದಾಗಿತ್ತು. ಅವಳ ಕನಸು ನನಸಾಯಿತು, ಇಷ್ಟ ನಿಜವಾಯಿತು, ಅನಾಥೆ ತಾನೆಂಬ ಆಂತರ್ಯ ದೂರಾಯಿತು... ಮರಳಿ ಮಳೆ ಶುರುವಾಯಿತು, ಹೊಸತು ಕನಸೊಂದು ಚಿಗುರೊಡೆಯಿತು.

Apr 15, 2010

ಜೀವ - ಜೀವನ; ಮರಳಿಸಲಾಗದ ಋಣ

ಅವತ್ತಿನ ಸಂಜೆಯ ಮಳೆಗೆ ನೆನೆದು ನೆಲ ಸೇರಿತ್ತು ಹೂಗಳ ಎಸಳು. ಮಳೆ ಬಿದ್ದ ಸಂಗತಿಯನ್ನು ಅಲ್ಲೆಲ್ಲಾ ಪಸರಿಸುತ್ತಿರುವ ಮಣ್ಣಿನ ಪರಿಮಳ. ನೆಲದೊಳಗಿನ ಧಗೆ ತಾಳಲಾಗದೆ ಹೊರಬಂದು ಹರಿದಾಡುತ್ತಿರುವ ಹುಳ-ಹುಪ್ಪಟೆಗಳ ಮೇಳ. ಹನಿಯ ರಭಸಕ್ಕೆ ಮುಚ್ಚಿಹೋಗಿದ್ದ ಗೂಡಿನ ದಾರಿಯನ್ನು ಸರಿಮಾಡುತ್ತಿರುವ ಇರುವೆಗಳ ದಳ. ಸಣ್ಣ ಮಿಂಚು, ಆಗೊಮ್ಮೆ ಈಗೊಮ್ಮೆ ಗುಡುಗಿನ ಸಪ್ಪಳ. ಕಪ್ಪೆಯ ವಟವಟ ತಾಳ. ಅಲ್ಲೊಂದು ಇಲ್ಲೊಂದು ಮಿಂಚುಹುಳ. ಹದವಾಗಿ ನೆನೆದಿದ್ದ ಅಂಗಳ. ಹಸಿ ಕೆಸರಿನಲ್ಲಿ ಹೆಜ್ಜೆ ಊರಿ ಗುರುತು ಬಿಟ್ಟಿದ್ದ ಹತ್ತು ಮತ್ತೂ ಒಂದಷ್ಟು ಪಾದತಳ. ನೀಲಿ ಬಾನ ತುಂಬಿದ್ದ ಮೋಡಗಳೂ ವಿರಳ. ಇದೆಲ್ಲದರ ಜೊತೆಗೆ ಮೌನವಾಗಿ ಮೇಲೇಳುತ್ತಿದ್ದ ಹಾತೆಗಳ ಬಳಗ. ಗೂಡ ಬಿಟ್ಟು ದೂರ ಓಡುವ ತುಮುಲ, ತವಕ. ಹಾರಿ ಗಗನದ ತುಂಬ, ಮುಗಿಲ ಮೀರಿ ಏರಲು ಉತ್ಕಟ ಉತ್ಸುಕ. ಚಿಗುರು ರೆಕ್ಕೆಯ ಬಲವೂ, ಬೆಳೆದ ವಯಸಿನ ಛಲವೂ, ಇರುವ ಮರೆಯುವ, ಇಹವ ಮರೆಸುವ ಮತ್ತು ಹಾರುವ ಆ ಹಾತೆಯೊಳಗಿತ್ತು. ಹರಿವ ನೆತ್ತರ ಧಮನಿ ಧಮನಿಯೊಳಿತ್ತು, ಅವ ನಡೆವ ಹಾದಿಯನೂ ತುಂಬಿತ್ತು.

ತುಂಬಿತ್ತು ಅವನ ದಿನಚರಿಯ ಪುಟಗಳು, ಅವನ ಕನಸ ಕುರಿತು. ಇಂದು, ನಾಳೆಯ ಜೊತೆಯ ನಿನ್ನೆಯನು ಮರೆತು. ನಗೆಯಿತ್ತು ಅಲ್ಲಿ, ನಸು ನಾಚಿಕೆಯೂ ಇತ್ತು. ಹುಸಿಕೋಪ, ಆರ್ದ್ರತೆ, ಕಣ್ಣೀರೂ ಇತ್ತು. ಕಳೆದ ನಿನ್ನೆಗಳಿತ್ತು, ನೂರು ನಿಟ್ಟುಸಿರಿತ್ತು, ಮರೆಯಲಾಗದ ಮನದ ಮುನಿಸ ಮಾತಿತ್ತು. ಪುಟ ಪುಟಕೂ ಹೊಸತೊಂದು ಅರ್ಥವಲ್ಲಿತ್ತು. ಅರ್ಥವಾಗದ ಮಾತು ಅವನೊಳಗೇ ಉಳಿದಿತ್ತು. ಅಲ್ಲೇ ಸತ್ತಿತ್ತು... ಅಲ್ಲೇ ಹುಟ್ಟಿತ್ತು..!

ಹುಟ್ಟಿತ್ತು ಅವರ ಸ್ನೇಹದ ನಡುವೆ ಸಣ್ಣದೊಂದು ಸಲುಗೆ. ಮನಸೆರಡನ್ನು ಬೆಸೆಯುವ ಸೇತುವೆ. ಅವಳ ಸಾಮೀಪ್ಯ, ಪರಸ್ಪರ ಒಲವ ಸಂಗತಿಯ ಒಸಗೆ. ಮಾತಾಡುತ್ತಿದ್ದರೆ ಈ ಲೋಕದ್ದಿಲ್ಲ ಗೊಡವೆ. ಆದರೂ ಒಮ್ಮೊಮ್ಮೊ ಮೌನವೇ ಸರಿಸಮಾನ ಮಾತಿಗೆ. ಮನವರಿತರೆ ಇದು ಸಹಜವೇ, ಪ್ರೀತಿ ಜೀವದ ಬೆಸುಗೆ. ಜಗದೊಳಗೆ, ಜಗದ ಜೊತೆ ಸಾಗಿತ್ತು ಅವರ ಪ್ರೀತಿಯ ಪಯಣ. ಋಣಾನುಬಂಧ ಅಧೀನ, ಅದಮ್ಯ ಆಶಾಯಾನ, ನಿರುತ ನಿರಂತರ.

ನಿರುತ ನಿರಂತರವೆಲ್ಲ ನಿರ್ಲಿಪ್ತವಾಯ್ತು, ಅವಳ ಗಾಳಿಗೋಪುರವೆಲ್ಲ ನುಚ್ಚುನೂರಾಯ್ತು, ಮುಂಜಾವಿನ ಕನಸೂ ಸುಳ್ಳಾಗುವುದೆಂದು ಮನನವಾಯ್ತು, ಮಳೆಬಿಲ್ಲ ಬಯಸಿದ ಕೈಗೆ ಸಿಡಿಲು ಬಡಿದಂತಾಯ್ತು.. ಅವನ ಸಾವಿನ ಸುದ್ದಿಯಿಂದ. ಅಂಥಾ ಅಗಾಧ ಮನಃಶಕ್ತಿಯವನು ಅವಳ ಮದುವೆಯ ಸುದ್ದಿ ಕೇಳಿ ಕ್ಷಣ ಅಧೀರನಾಗಿದ್ದ. ಆದರೂ ಮನೆಯವರನ್ನು ಒಪ್ಪಿಸುವೆನೆಂದ ಅವಳ ಮಾತನ್ನು ಮನಸೋಇಚ್ಛೆ ಒಪ್ಪಿದ್ದ. ವಾರದ ನಂತರ ಮನೆಯವರು ಸಹಮತವಿತ್ತದ್ದನ್ನು ಅವಳು ಹೇಳಿದಾಗ ಗದ್ಗದಿತನಾಗಿದ್ದ. ಅವಳ ಕೈ ಮೇಲೆ ಕೈಯಿಟ್ಟು ಕಣ್ಮುಚ್ಚಿ ಕಣ್ಣಲ್ಲೇ ಉಪಕಾರ ಸ್ಮರಿಸಿದ್ದ. ಹಿತವಾಗಿ ತಲೆ ನೇವರಿಸಿ ಹೊರಟಿದ್ದ... ಕಣ್ಣೀರ ಉಪ್ಪುರುಚಿ ಅವಳನ್ನು ವಾಸ್ತವಕ್ಕೆ ದೂಡಿತ್ತು. ಮರುಕ್ಷಣ ಮತ್ತೊಮ್ಮೆ ಕಣ್ಣೀರು ಮಂಜಾಗಿಸಿತು ಅವಳ ಕಣ್ಣುಗಳನ್ನು.

ಅವಳ ಕಣ್ಣುಗಳಲ್ಲಿ ವರ್ಷದ ನಂತರ ನಗು ಇಣುಕಿತ್ತು. ಮದುವೆಯ ಮಾತುಕತೆ ಮನೆಯಲ್ಲಿ ನಡೆದಿತ್ತು. ಹಳೆ ನೆನಪುಗಳು ದೂರಾಗದಿದ್ದರೂ ಹೊಸತರರೊಂದಿಗೆ ಬೆರೆಸಿ ಮರೆಯುವ ಯೋಚನೆ. ಹಾಗಾಗಿ ಅದೇ ವರನನ್ನು ಒಪ್ಪಿದ್ದಳು. ಅವನ ಗೆಳೆಯನೆಂದೂ ತಿಳಿದಿದ್ದಳು. ‘ಹೋಲಿಕೆಯು ಹೊಸತನ್ನು ಹೊಲಸಾಗಿಸುತ್ತದೆ’ ಹಾಗಾಗಿ ಅವರಿಬ್ಬರನ್ನು ಹೋಲಿಸುವ ಗೋಜಿಗೇ ಹೊಗಲಿಲ್ಲ ಅವಳು. ಅದೇಕೋ ಅಂದು ಅವನು ಎಂದಿನಂತೆ ಕಾಣಿಸಲಿಲ್ಲ. ಸಹಜತೆಯ ಸೋಗು ತೀರಾ ಅಸಹಜವಾದಂತಿತ್ತು. ಮನೆಯವರ ಮಾತುಕತೆಯಿಂದ ಇಬ್ಬರೂ ದೂರ ಬಂದಿದ್ದರು. ಬಹಳ ದಿನಗಳಿಂದ ಮುಚ್ಚಿಟ್ಟಿದ್ದ ಒಂದು ವಿಷಯ ಅಂದು ಅವಳೆದುರು ತೆರೆದಿಟ್ಟಿದ್ದ. " ನನ್ನ ಜೀವದ ಗೆಳೆಯ ಅವನು. ಅವನ ಸಾವಿಗೆ ನಾನೇ ಕಾರಣವೇನೋ..? ಬದುಕ ತಿದ್ದಿ, ಜೀವನವನ್ನು ತೋರಿಸಿದ್ದಕ್ಕೆ ಪ್ರತಿಯಾಗಿ ಹೊರಲಾರದಷ್ಟು ಋಣವಿತ್ತು ನಮ್ಮಿಬ್ಬರಿಂದಲೂ ದೂರವಾದ. ಬಹುಶಃ ನಾನವತ್ತು ಅವನಲ್ಲಿ ನಿಮ್ಮನ್ನು ಇಷ್ಟಪಟ್ಟದ್ದು ಹೇಳಿರದಿದ್ದರೆ.. ಹೀಗಾಗುತ್ತಿರಲಿಲ್ಲವೇನೋ?..." ಸಂಜೆಯ ಮೌನದಲ್ಲೂ ಮುಂದೆ ಅವನಾಡಿದ ಮಾತು ಕೇಳದಾಯ್ತು. ಋಣಮುಕ್ತನಾಗಿ, ಜೀವ ಮತ್ತು ಜೀವನ ಎರಡನ್ನೂ ದೂರಮಾಡಿದ್ದಕ್ಕೆ ಒಂದು ಕ್ಷಣ ಅವನ ಮೇಲೆ ಕೋಪಗೊಂಡಳು, ವಿಶಾಲ ವಿಶ್ವದಲ್ಲಿ ಬದುಕು ಸಾಗಿಸಲಾರದೆ ಜೀವ ತ್ಯಜಿಸಿದ ಹೇಯಕೃತ್ಯ ನೆನೆದು ನಿಟ್ಟುಸಿರಿಟ್ಟಳು. ಮರುಕ್ಷಣ ದುಃಖ ಉಮ್ಮಳಿಸಿ ಮನಸಾರೆ ಅತ್ತುಬಿಟ್ಟಳು, ಅವನ ಕೈ ಹಿಡಿದು ಕುಸಿದು ಕುಳಿತಳು, ಅವನ ನೆನಪಿನೊಂದಿಗೆ ಅವನೂ.

ಅವನೂ ಎಲ್ಲರಂತೆ ಬೆಳಕ ಬಯಸಿ ಬದುಕಿದವನು, ಕತ್ತಲಾಗಿಹೋದನು. ಬಾನಿನಾಚೆಗೆ ಹಾರುವ ಬಯಕೆಯವನು, ಬದುಕ ದೀಪಕ್ಕೆ ಮುತ್ತಿಟ್ಟ ಹಾತೆಯಾದನು. ಉರಿದು ಬೆಳಕಾಗಬಯಸಿದವನು, ಬೆಳಕನ್ನೇ ಸುತ್ತಿ ಸುಟ್ಟುಹೋದನು. ಬದುಕ ತಿಳಿಯುವ ಮೊದಲೇ ಬಾಳ ತೊರೆದವನಾದನು, ಬರಿಯ ನೆರಳಾಗಿ ಉಳಿದನು. ನೋಡಿದವರಲಿ ನೆನಪಾದನು, ಕಂಡವರಲಿ ಕಥೆಯಾದನು, ಕೆಲವರಲಿ ಕನಸಾದನು... ನನ್ನಲ್ಲಿ ಮರಳಿಸದ ಋ ಣ ವಾ ದ ನು.

Jan 26, 2010

ಹೆಸರಿಲ್ಲದವಳು ; ಅವನ ಉಸಿರಾದವಳು.

ಸದ್ದಿಲ್ಲದೆ ನಡೆದು ಹೋಗಿತ್ತು. ಅಲ್ಲಿ, ಸಮಾರಂಭದ ಗೌಜಿಯಿತ್ತು. ಶುಭಸಮಯ ರಂಗುಚೆಲ್ಲಿತ್ತು. ಓಲಗದ ಗದ್ದಲ, ಗೆಲುವಿತ್ತು. ಸುಗಂಧ ಸುವಾಸನೆ ಎಲ್ಲೆಡೆ ಹರಡಿತ್ತು. ನಗೆಮಲ್ಲಿಗೆ ಪರಿಮಳ ಸೂಸಿತ್ತು. ಕಣ್ಣೀರು ಕೆಲವು ಕಣ್ಣ ತೋಯಿಸಿತ್ತು. ಮಂಗಳ ಮಂತ್ರಗಳೂ ಮೊಳಗಿತ್ತು. ಮಧುರ ಮನಸೆರಡು ಒಂದಾಗಿತ್ತು. ಅವನ ಮದುವೆ ಸುದ್ದಿಯಿಲ್ಲದೆ ನಡೆದು ಹೋಗಿತ್ತು. ಹುಣ್ಣಿಮೆಯ ಇರುಳಂತೆ ಕಳೆದುಹೋಗಿತ್ತು, ವಾಸ್ತವವೂ ಮರೆತಿತ್ತು.

ಮರೆತ ನೆನಪು ದಿಬ್ಬಣ ಹೊರಟಿತು, ಸಿಂಗಾರವಿಲ್ಲದ ಮದುವಣಗಿತ್ತಿಯೊಂದಿಗೆ. ನೆನಪೊಂದೇ ಅಲ್ಲಿ ಅವಳ ಜೊತೆ. ನೂರೊಂದು ಕನಸ ಬಂಡಿ ಏರಿದವಳು ಏಕಾಂಗಿಯಾಗಿ ಉಳಿದು ಹೋದಳು. ಸಿಹಿ ತಿಳಿಯುವ ಮೊದಲೇ ಕಹಿ ಉಂಡಿದ್ದಳು ಅವಳು.

ಅವಳು ಅವನ ಮೊದಲು ಕಂಡದ್ದು ಬರಿಯ ಅಕ್ಷರಗಳಲ್ಲಿ. ಅವಳ ಪ್ರತಿಯೊಂದು ಕಥೆಗೂ ಅವನ ಕಿರುಸಾಲಿನ ಮನದಿಂಗಿತವಿರುತ್ತಿತ್ತು. ಬರೆಯುವ ಅಭ್ಯಾಸವಿರದಿದ್ದರೂ, ಓದುವ ಅಭಿರುಚಿ ಅವನಲ್ಲಿತ್ತು. ಅವನ ಅಂತಹಾ ಸಾಲುಗಳಿಗೆ ಅವಳ ಇಂಗಿತ, ಪ್ರತ್ಯುತ್ತರಗಳು ಅವನನ್ನು ಸುಮ್ಮನಾಗಿಸುತ್ತಿದ್ದವು, ಮತ್ತೊಂದು ಪ್ರಶ್ನೆ ಬಾರದಂತಾಗಿಸುತ್ತಿದ್ದವು. ಬರಿಯ ಅಕ್ಷರಗಳೇ ಅವನನ್ನು ಅವಳೆಡೆಗೆ ಒಯ್ದದ್ದು, ಅವಳನ್ನು ಅವನೆದೆಗೆ ದೂಡಿದ್ದು. ಹಾಗೇ, ಅವರ ಸಂಗ, ಸಂವಾದ ಬರವಣಿಗೆಯ ಪರಿಧಿ ದಾಟಿತು, ಮುಂದುವರೆಯಿತು, ಸಶೇಷವಾಯಿತು.. ಒಬ್ಬರನ್ನೊಬ್ಬರು ನೋಡದೇ..! ಅಂತರಪಟವೂ ಸರಿದಿತ್ತು, ಮದುವೆ ಮಂಟಪದಲ್ಲಿ.

ಮಂಟಪದಲ್ಲೆಲ್ಲೂ ಗಮ್ಮತ್ತೇ ಗಮ್ಮತ್ತು. ಅಂಥದೇ ಗಮ್ಮತ್ತು ಅಂದೊಮ್ಮೆ ಅವಳಲ್ಲೂ ಇತ್ತು. ಅವಳ ಗೆಳತಿಯಿಂದ ಅವನ ಒಂದು ಫೊಟೋ ಸಿಕ್ಕಿತ್ತು. ಅವರೆಲ್ಲಾ ಸಹಪಾಠಿಗಳೆಂದೂ ತಿಳಿಯಿತು. ಅವನೊಬ್ಬ ಮುಗ್ಧ ಹುಡುಗನೆಂದೂ ಗೊತ್ತಾಯ್ತು. ಅಂದಿನಿಂದ ಅವಳಿಗವನು ಆಪ್ತನಂತಾಯ್ತು. ಬದಲಾಯ್ತು ಅವಳ ಕಥಾ ಪ್ರಪಂಚ.

ಪ್ರಪಂಚ ಅಷ್ಟು ಸಣ್ಣದೆಂದು ಅವಳೆಂದೂ ಗ್ರಹಿಸಿರಲಿಲ್ಲ, ಸಂಬಂಧಿಕರ ಮದುವೆಯೊಂದರಲ್ಲಿ ಅವನನ್ನು ಕಾಣುವವರೆಗೆ..! ಫೋಟೋದಲ್ಲಿ ಕಂಡ ಮುಖಚರ್ಯೆ ಹೆಚ್ಚೇನೂ ಬದಲಾಗಿರಲಿಲ್ಲ, ಚಿಗುರು ಮೀಸೆಯ ಹೊರತಾಗಿ. ವಿಪರ್ಯಾಸವೆಂದರೆ ಅವನಿಗಿದೊಂದೂ ತಿಳಿದೇ ಇರಲಿಲ್ಲ, ಅವಳು ತನ್ನನ್ನು ಪರಿಚಯಿಸಿಕೊಳ್ಳುವವರೆಗೂ..! ಮತ್ತೆಂದೂ ಅವರ ಪ್ರಪಂಚದಲ್ಲಿ ಕತ್ತಲಾಗಲಿಲ್ಲ... ತಲೆಯೆತ್ತಲಾಗಲಿಲ್ಲ ಅವಳಿಂದ, ದುಃಖ ಉಮ್ಮಳಿಸಿ, ನೆನಪು ಜೊತೆಯಾಗಿ.

ಜೊತೆಯಾಗಿ ಅವನೊಂದಿಗೆ ಹೆಜ್ಜೆಹಾಕಬೇಕೆಂದು ಹಚ್ಚಿದ ದೀಪ ಆರಿ ಹೋಯ್ತು ಅಂದು, ಅವನ ಜೀವನ ಸಂಗಾತಿಯಾಗುವ ವಿಷಯ ಬಂದಾಗಿನಂದು. ಹೆಸರಿಲ್ಲದವಳು ಅವನ ಉಸಿರಾಗಬಯಸಿದ್ದಳು. ಅದೆಷ್ಟೋ ವರುಷಗಳ ಅವರ ಅಂಥಾ ಸ್ನೇಹಕ್ಕೆ, ಅವಳೊಂದಿಗಿನ ಒಡನಾಟಕ್ಕೆ, ಅವನಿಗೇ ಸಮರ್ಪಣ ಎನಿಸುವ ಅವಳ ನಿಶ್ಕಲ್ಮಷ ಅನುರಾಗಕ್ಕೆ ತರ್ಪಣವೆರೆದಿದ್ದ. ನಿಸ್ಸಹಾಯಕನಂತೆ ಅನುಕಂಪದ ದೃಷ್ಟಿ ಬೀರಿದ್ದ. ತರ್ಕಬದ್ಧವಾದ ತನ್ನ ಮನದಿಂಗಿತವನ್ನು ಅವಳಲ್ಲಿ ಅರುಹಿ, ಕೈಯಲ್ಲಿ ಮದುವೆಯ ಕಾಗದವಿತ್ತಿದ್ದ, ಜೊತೆಗೆ ನಾಲ್ಕು ಕಾಳು ಅಕ್ಷತೆ.

ಅಕ್ಷತೆಗಳಾಗಲೇ ಹಾರೈಕೆಯನ್ನು ಹೊತ್ತು ವಧೂವರರನ್ನು ಆಶೀರ್ವದಿಸಲಾರಂಭಿಸಿತ್ತು. ನಿಂತಲ್ಲೂ ಅವಳೊಳಗೆ ಅವನ ಆ ಮಾತುಗಳೇ ಮಾರ್ದನಿಸುತಿತ್ತು. "ನನ್ನನ್ನು ಮರೆತುಬಿಡು. ಮನೆಯವರ ಒತ್ತಾಯ, ಓರಗೆಯವರ ಒತ್ತಾಸೆ. ಅಲ್ಲದೆ ಅವಳು..." ಜೀವನವನ್ನು ಅವಳದೇ ದೃಷ್ಟಿಯಲ್ಲಿ ಓದಿದವನು ಅವಳಿಂದಲೇ ದೂರವಾಗಿದ್ದ. ಸಹಜತೆ, ತನ್ನತನ, ನಂಬಿಕೆಗಳನ್ನು ಹಣ, ಅಂತಸ್ತು, ಖ್ಯಾತಿಗಳಾಗಿ ತಿದ್ದಿದ್ದ. ತನಗಾಗಿ ಮಿಡಿಯುವ ಇನ್ನೊಂದು ಮನದ ಮಾತ ಅರಿಯದವನಾಗಿ, ಓರಗೆಯವರ ಒತ್ತಾಸೆಯ ಓಲೈಸಿದ್ದ. ಸಂತಸದ ಅಂಗಳ ಮರೆತು ದೂರದ ಬೆಟ್ಟವನೇ ನೆಚ್ಚಿದಂತಿದ್ದ. ಅವನ ಆ ಮಾತು, ಅವನ ಬಗೆಗಿನ ಅವಳ ತಹತಹಿತ, ತುಡಿತಗಳ ತಳ ಅಲ್ಲಾಡಿಸಿದವು. ಹೊಸ ಕಥೆಯನ್ನು ಹೊಸದೊಂದು ಪುಟದಲ್ಲಿ ಬರೆಯಾಲರಂಭಿಸಿದ್ದನು. ಹಳೆಯದನ್ನೆಲ್ಲ ನಿಲ್ಲಿಸಿ, ಹೊಸ ಕಥಾಹಂದರ ರೂಪಿಸಿ, ಹೊಸ ಜಗದ ರೂಪಸಿಯ ಕೈ ಹಿಡಿದು.

ಕೈಹಿಡಿದು ಅವರು ನಡೆದ ಹಾದಿಯೆಷ್ಟೋ.? ಕಳೆದ ಕಾಲವೆಷ್ಟೋ.? ಸವಿದ ಸಮಯವೆಷ್ಟೋ.? ಆದರಿಂದು ಅಲ್ಲಿ ಬರಿಯ ಏಳು ಹೆಜ್ಜೆಗಳು ಅವರನ್ನು ಬಂಧಿಸಿದ್ದವು, ಜೊತೆಯಾಗಿಸಿದ್ದವು ಜನುಮ ಜನುಮಗಳವರೆಗೆ. ಹೋಮದ ಮುಂದೆ ಕುಳಿತು ಹೊಗೆ ಸಹಿಸಲಾಗದೆ ಅವನ ಕಣ್ಣುಗಳು ತುಂಬಿತ್ತು. ಕಣ್ಣೊರೆಸಿದ ಅವನ ಹೆಗಲ ಶಾಲೂ ನೆನೆದಿತ್ತು. ಗುಣಗಳೆಲ್ಲವನು ಗೌಣ ಮಾಡಿ, ವಚನ ಮರೆತವನನ್ನು ನೆನೆದು ಅವಳ ಕಣ್ಣೂ ತುಂಬಿತ್ತು. ಮರೆಯಲಾಗದ ಮನಸ ಮುನಿಸ ಸಹಿಸದೆ ಮನಸೂ ಅಳುತಿತ್ತು. ಸೀರೆಯ ಸೆರಗೂ ನೆನೆದಿತ್ತು, ಹಾರೈಸಲೆಂದು ಕೈಯಲ್ಲಿರಿಸಿಕೊಂಡಿದ್ದ ಆ ಅಕ್ಷತೆಯೂ...